ಬೆಂಗಳೂರು : ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಅವಕಾಶವಿಲ್ಲ. ಇವುಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 14ರಂದು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಈ ವೇಳೆ ಪಿಒಪಿ ಮೂರ್ತಿಗಳ ಬದಲಿಗೆ ಪರಿಸರಸ್ನೇಹಿ ಗಣೇಶಮೂರ್ತಿಗಳನ್ನು ಬಳಸಬೇಕು. ಹೀಗಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ, ಸಾಗಾಟಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಪಿಒಪಿ ಮೂರ್ತಿಗಳನ್ನು ರಾಜ್ಯದ ಯಾವುದೇ ನದಿ, ಸರೋವರ, ಕೆರೆ- ಕಟ್ಟೆಯಲ್ಲಿ ವಿಸರ್ಜನೆಗೆ ಅನುಮತಿಸುವುದಿಲ್ಲ. ಜತೆಗೆ ಗಣೇಶ ಹಬ್ಬದ ಆಚರಣೆ ವೇಳೆ ಶಬ್ದಮಾಲಿನ್ಯಕ್ಕೂ ಅವಕಾಶವಿಲ್ಲ. ರಾತ್ರಿ 10 ಗಂಟೆವರೆಗೂ ಸಂಗೀತ, ಡಿಜೆ ಬಳಸಬೇಕು. ಅದರೂ ಅನುಮತಿಸಿದ ಡೆಸಿಬಲ್ನಷ್ಟು ಶಬ್ದ ಮಾತ್ರ ಇರಬೇಕು ಎಂದು ಹೇಳಿದರು.
ಪರಿಸರ ಜಾಗೃತಿ ಮೂಡಿಸಿ:
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಪಡೆದು ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಪಿಒಪಿಯಿಂದ ಮನುಷ್ಯರ ಆರೋಗ್ಯದ ಜತೆಗೆ ಮಣ್ಣು, ಜಲಚರಗಳು ಸಹ ಹಾಳಾಗುತ್ತವೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಪರವಾನಗಿ ಕೊಡುವ ಮೊದಲೇ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕಟ್ಟುನಿಟ್ಟಾಗಿ ಕಾನೂನು ಪಾಲನೆ ಆಗಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ: ಖಂಡ್ರೆ
ರಾಜ್ಯಾದ್ಯಂತ ನೆರೆ ಹಾಗೂ ಬರ ಪರಿಶೀಲನೆ ಮಾಡಲಾಗಿದೆ. ಬರ ಪ್ರಭಾವ ಇರುವ ಕಡೆ ಕುಡಿಯುವ ನೀರಿನ ಸಮಸ್ಯೆ ಬಗೆಹಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಈಗಾಗಲೇ ಬೆಳಗಾವಿ, ಕಲಬುರಗಿ, ಚಿತ್ರದುರ್ಗದಲ್ಲಿ ಪ್ರಗತಿ ಪಶೀಲನಾ ಸಭೆ ನಡೆಸಲಾಗಿದೆ. 600-700 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಖಾಸಗಿ ಬೋರ್ವೆಲ್ಗಳನ್ನು ಪಡೆದು ನೀರು ಒದಗಿಸುತ್ತಿದ್ದೇವೆ. ಕುಡಿಯುವ ನೀರಿಗಾಗಿ 189 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.
