- ಯುಗಾದಿ ಸಂಭ್ರಮದಲ್ಲಿದ್ದ ರೈತರಿಗೆ ತಣ್ಣೀರೆರೆಚಿದ ಆಲಿಕಲ್ಲು ಮಳೆ । ನಷ್ಟದಿಂದ ರೈತ ಕಂಗಾಲು
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುಗಾದಿಗೂ ಎರಡು ದಿನ ಮುನ್ನ ಸುರಿದ ಆಲಿಕಲ್ಲು, ಬಿರುಗಾಳಿ ಮಳೆ ರೈತರಿಗೆ ಕಣ್ಣೀರು ತರಿಸಿದ್ದು ಅಪಾರ ಬೆಳೆಹಾನಿಯಾಗಿದೆ. 350ಕ್ಕೂ ಹೆಚ್ಚು ಎಕರೆ ಪ್ರದೇಶದ ಫಸಲು ಹಾನಿಗೊಳಗಾಗಿವೆ. ಇದು ರೈತರಿಗೆ ಯುಗಾದಿ ಸಂಭ್ರಮವೇ ಇಲ್ಲವಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮಂಗಳವಾರ, ಬುಧವಾರ ಭಾರಿ ಪ್ರಮಾಣದಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಬಾಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಜಿಲ್ಲಾ ತೋಟಗಾರಿಕೆ ಇಲಾಖೆ ಆಲಿಕಲ್ಲಿನ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯ ಸಮೀಕ್ಷೆ ನಡೆಸುತ್ತಿದ್ದು, ಗುರುವಾರದ ಸರ್ವೆ ಪ್ರಕಾರ, ಜಿಲ್ಲೆಯಲ್ಲಿ 350 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಶೇ.80ರಷ್ಟು ಪ್ರಮಾಣದಲ್ಲಿ ಬಾಳೆ ನಷ್ಟ ಉಂಟಾಗಿದೆ.
ಕಲ್ಲಂಗಡಿಗೂ ಹೊಡೆತ:ಮಾರುಕಟ್ಟೆಯಲ್ಲಿ ಬೆಲೆ ಇರುವ ಕಲ್ಲಂಗಡಿಗೆ ಭರ್ಜರಿ ಮಾರಾಟದ ಕಾಲದಲ್ಲೇ ಆಲಿಕಲ್ಲು ಹಾನಿ ಮಾಡಿದೆ. ಕಷ್ಟಪಟ್ಟು ಬೆಳೆದ ಬೆಳೆ ಮಣ್ಣುಪಾಲಾಗಿರುವುದು ಸಂಕಷ್ಟ ತರಿಸುತ್ತಿದೆ. ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ.---
ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿಸಿ ತರಲಾಗಿತ್ತು. ಆದರೆ, ಮಳೆ ಎಲ್ಲಾ ಸಡಗರವನ್ನು ಕಸಿದಿದೆ. ಟೊಮ್ಯಾಟೊ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಉಳಿದಂತೆ, ಬಾಳೆಯೂ ಕೂಡ ನೆಲಕಚ್ವಿದ್ದು, ರೈತರು ಕಂಗಲಾಗಿದ್ದಾರೆ. ಚಾಮರಾಜನಗರ ತಾಲೂಕಿನ ಕಡುವಿನಕಟ್ಟೆಹುಂಡಿ, ವೀರನಪುರ, ಉಡಿಗಾಲ, ನಂಜೇದೇವನಪುರ, ಹನೂರು ತಾಲೂಕಿನ ಹಲವೆಡೆ ಎರಡು ದಿನದ ಮಳೆ ರೈತರ ತಿಂಗಳುಗಟ್ಟಲೆ ಶ್ರಮವನ್ನು ವ್ಯರ್ಥ ಮಾಡಿದೆ.- ಗುರುಸ್ವಾಮಿ, ವೀರನಪುರ ರೈತ
---ಆಲಿಕಲ್ಲು ಸಹಿತ ಮಳೆಯಿಂದ ಬೆಳೆ ಹಾನಿ ಉಂಟಾಗಿರುವ ಕುರಿತು ಸರ್ವೆ ನಡೆಸಲಾಗುತ್ತಿದೆ. ಸದ್ಯಕ್ಕೆ 350ಕ್ಕೂ ಅಧಿಕ ಎಕರೆಯಲ್ಲಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಅಧಿಕ ಪ್ರಮಾಣದಲ್ಲಿ ಬಾಳೆ ಬೆಳೆ ಹಾನಿಯಾಗಿದೆ. ಸರ್ವೆ ಮುಗಿದ ಬಳಿಕ ಪರಿಹಾರಕ್ಕೆ ಕ್ರಮ ಕಳುಹಿಸಲಾಗುವುದು.
- ಶಿವಪ್ರಸಾದ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ.---
20ಸಿಎಚ್ಎನ್14ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದಲ್ಲಿ ಬಾಳೆ ಬೆಳೆ ಹಾನಿಯಾಗಿರುವುದು.