ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೀನಿಯರ್ ಛೇಂಬರ್ ಆಶ್ರಯದಲ್ಲಿ ಉಪನ್ಯಾಸ
ಭಾರತ ದೇಶದಲ್ಲಿ ಪ್ರತಿ ವರ್ಷ ರೇಬಿಸ್ ಕಾಯಿಲೆಯಿಂದ 5 ರಿಂದ 6 ಸಾವಿರ ಜನರು ಮರಣ ಹೊಂದುತ್ತಿದ್ದಾರೆ ಎಂದು ತೀರ್ಥಹಳ್ಳಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರುಳಿಧರ್ ತಿಳಿಸಿದರು.
ಗುರುವಾರ ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೀನಿಯರ್ ಛೇಂಬರ್ ಆಶ್ರಯದಲ್ಲಿ ನಡೆದ ಮಾನವನಿಗೆ ಪ್ರಾಣಿಗಳಿಂದ ಬರುವ ಪ್ರಾಣಿಜನ್ಯ ರೋಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಹುಚ್ಚು ನಾಯಿ ಮನುಷ್ಯರಿಗೆ ಕಚ್ಚುವುದರಿಂದ, ಆ ನಾಯಿ ಜೊಲ್ಲಿ ನಿಂದ ರೇಬಿಸ್ ಬರುವ ಸಾಧ್ಯತೆ ಇದೆ. ಹುಚ್ಚು ನಾಯಿಗಳು ಹಸುಗಳಿಗೆ ಕಚ್ಚುವುದರಿಂದ ಹಸುಗಳಿಗೂ ಸಹ ರೇಬಿಸ್ ಬರುತ್ತದೆ. ಯಾವುದೇ ನಾಯಿ ಕಚ್ಚಿದಾಗ ಪ್ರಥಮ ಚಿಕಿತ್ಸೆಯಾಗಿ ಕಚ್ಚಿದ ಜಾಗವನ್ನು ಸೋಪಿನಿಂದ ಕನಿಷ್ಠ 15 ನಿಮಿಷ ಚೆನ್ನಾಗಿ ತೊಳೆಯಬೇಕು. ಇದರಿಂದ ಶೇ. 90 ರಷ್ಟು ರೋಗ ಹರಡುವುದನ್ನು ತಡೆಯುತ್ತದೆ. ನಾಯಿ ಅಥವಾ ಯಾವುದೇ ಸಾಕು ಪ್ರಾಣಿಗಳನ್ನು ಮುಟ್ಟಿದಾಗ ಕೈಯನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಿಗಳ ಮೈ ಮೇಲೆ ಇರುವ ವೈರಸ್ ಮನುಷ್ಯರಿಗೂ ಹರಡುತ್ತದೆ.ಇಲಿಗಳು ತೆರೆದಿಟ್ಟ ನೀರಿನ ತೊಟ್ಟಿಯೊಳಗೆ ಮೂತ್ರ ಮಾಡುವ ಸಾಧ್ಯತೆ ಇದೆ. ಆ ನೀರನ್ನು ಬಳಸಿದಾಗ, ಕೈ ಕಾಲು ತೊಳೆದಾಗ ಆಲರ್ಜಿ, ಜ್ವರ ಬರುವ ಸಾಧ್ಯತೆ ಇದೆ ಎಂದರು.