)
ಕನ್ನಡಪ್ರಭ ವಾರ್ತೆ ಬೆಂಗಳೂರು
ದೊಮ್ಮಲೂರಿನಲ್ಲಿ ಸೇನೆಗೆ ಸೇರಿದ ಕಾಂಪೌಂಡ್ ಕುಸಿದು 4 ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಹಸುಗಳು ಮುನಿರಾಜು ಎಂಬುವರಿಗೆ ಸೇರಿದ್ದು ಈ ಸ್ಥಳದಲ್ಲಿ ಎಂಟು ಹಸು ಮತ್ತು ಕರುಗಳನ್ನು ಕಟ್ಟಲಾಗಿತ್ತು, ಸಂಜೆ ಮಳೆ ಬೀಳುತ್ತಿದ್ದಂತೆ ಶಿಥಿಲಗೊಂಡಿದ್ದ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಪಾಲಿಕೆ ಸಿಬ್ಬಂದಿ, ಶಾಸಕ ಹ್ಯಾರಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲಿಕರಿಗೆ ಸಾಂತ್ವನ ಹೇಳಿದರು.
ಪಾಲಿಕೆಯಿಂದ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ರಾಜ್ಯ ಪಶುಸಂಗೋಪನಾ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಮುನಿರಾಜು ಕುಟುಂಬಕ್ಕೆ ತಿಳಿಸಿದ್ದಾರೆ.ಸಂಚಾರ ಅಸ್ತವ್ಯಸ್ತ:
ಮಲ್ಲೇಶ್ವರಂ ಎಂಬೆಸ್ಸಿ ಹೆರಿಟೇಜ್ ಸಮೀಪ ಮರ ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಸವೇಶ್ವರನಗರ 2ನೇ ಹಂತ, ಪದ್ಮನಾಭನಗರದಲ್ಲಿ ಎರಡು ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನೀರಿನ ಹರಿವು ಸರಿಪಡಿಸಿದ ಸಿಬ್ಬಂದಿ:
ಶೇಷಾದ್ರಿಪುರಂ ಅಂಡರ್ ಪಾಸ್, ಓಕಳಿಪುರ ಅಂಡರ್ ಪಾಸ್, ಮಾರ್ಕೆಟ್ ಫ್ಲೈಓವರ್, ಕೆ.ಆರ್.ವೃತ್ತ ಅಂಡರ್ ಪಾಸ್ ಸೇರಿದಂತೆ ಹಲವೆಡೆ ನೀರು ನಿಂತು ವಾಹನಗಳು ಮುಂದೆ ಹೋಗದಂತೆ ಅಡ್ಡಿಯಾಗಿತ್ತು. ಪಾಲಿಕೆ ಸಿಬ್ಬಂದಿ ಸುಮಾರು 4 ಗಂಟೆಗಳ ಕಾಲ ಕಸ ತೆರವುಗೊಳಿಸಿದ್ದರಿಂದ ರಾತ್ರಿ 11 ಗಂಟೆಗೆ ಮಳೆ ಬಂದರೂ ರಸ್ತೆಯಲ್ಲಿ ನೀರು ನಿಲ್ಲದೆ ವಾಹನಗಳ ಸಂಚಾರ ಮಾಮೂಲಿನಂತಾಗಿತ್ತು.