ಸವಣೂರು: ಖಾನಾವಳಿಯಲ್ಲಿ ಊಟದ ಬಿಲ್ ಪಾವತಿಸುವ ಸಂಬಂಧ ಖಾನಾವಳಿ ಮಾಲೀಕರು ಸೇರಿ ಕುಟುಂಬದ 6 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಶ್ಪಾಕ, ಅಲ್ಲಾವುದೀನ್ ಹಾಗೂ ಪರಾಜ್ ಎಂಬವರೇ ಬಂಧಿತ ಆರೋಪಿಗಳು. ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಸಂಗಮೇಶ್ವರ ಖಾನಾವಳಿಯಲ್ಲಿ ಮಂಗಳವಾರ ರಾತ್ರಿ ಊಟ ಮಾಡಿದ ನಂತರ ಬಿಲ್ ಪಾವತಿಸುವಂತೆ ಮಾಲೀಕರು ಕೇಳಿದ್ದಾರೆ.ಆಗ ಅಶ್ಪಾಕ, ಅಲ್ಲಾವುದೀನ್ ಹಾಗೂ ಪರಾಜ್ ಎಂಬವರು ಬಿಲ್ ಪಾವತಿಸುವುದಿಲ್ಲವೆಂದು ವಾಗ್ವಾದ ನಡೆಸಿದ್ದಾರೆ. ಖಾನಾವಳಿ ಮಾಲೀಕ ಮೃತ್ಯುಂಜಯ ಕನವಳ್ಳಿಮಠ ಹಾಗೂ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ 6 ಜನರ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಕುರಿತು ಸವಣೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಕ್ರಮಕ್ಕೆ ಮುತಾಲಿಕ ಆಗ್ರಹ: ಖಾನಾವಳಿಯಲ್ಲಿ ಊಟ ಮಾಡಿದ ನಂತರ ಹಣ ಕೇಳಿದರೆ ಮಾಲೀಕರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಖಾನಾವಳಿ ನಡೆಸುವ ಕನವಳ್ಳಿಮಠ ಕುಟುಂಬಸ್ಥರ ಮನೆಗೆ ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಷ್ಟೇ ಅಲ್ಲದೇ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಸ್ಥಳೀಯ ಹಿಂದುಗಳಿಗೆ ಮನಶಾಂತಿ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆಗೆ ಸಣ್ಣ ಖಾನಾವಳಿ ಮಾಡಿಕೊಂಡು ಉಪಜೀವನ ಕೈಗೊಂಡಿರುವ ಕುಟುಂಬಸ್ಥರ ಮೇಲೆ ಮೂವರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಪರದಾಡುವಂಥ ಸ್ಥಿತಿ ಸವಣೂರಿನಲ್ಲಿ ನಿರ್ಮಿಸಿರುವುದು ಯಾರು? ಕೂಡಲೇ ಪ್ರಕರಣ ದಾಖಲಾತಿಯಲ್ಲಿ ಕೊಲೆಗೆ ಯತ್ನ ಎಂದು ಸೇರ್ಪಡೆಗೊಳಿಸಿ ತಪ್ಪಿಸ್ಥರಿಗೆ ಕಠಿಣ ಶಿಕ್ಷೆಗೆ ಸಹಕಾರ ನೀಡಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದರು.ಶ್ರೀರಾಮಸೇನಾ ಪ್ರಮುಖ ಗದಿಗೆಪ್ಪ ಕುರವತ್ತಿ, ಮಹೇಶ ಮುದಗಲ್, ಮಹೇಶ ಅಯ್ಯಣ್ಣವರ, ಪರಪ್ಪ ಅರಳಿಕಟ್ಟಿ, ನಾಗರಾಜ ಅರಳಿಕಟ್ಟಿ, ಸೋಮು ಲಮಾಣಿ, ಮಂಜುನಾಥ ಕಾಟೇಕರ, ಪ್ರಾಣೇಶ ವ್ಯಾಪಾರಿ, ಅಶೋಕ ಬಳಿಗಾರ, ಫಕ್ಕಿರೇಶ ಕಾಳೆ, ಅಭಿಷೇಕ ಅಕ್ಕಿ ಇದ್ದರು.