3ನೇ ದಿನಕ್ಕೆ ಪೌರ ನೌಕರರ ಮುಷ್ಕರ: ಬೆಂಬಲಿಸಿದ ದಲಿತ ಸಂಘರ್ಷ ಸಮಿತಿ

KannadaprabhaNewsNetwork | Published : May 30, 2025 12:22 AM
ನರಸಿಂಹರಾಜಪುರ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರು ಪಟ್ಟಣ ಪಂಚಾಯಿತಿ ಎದುರು ನಡೆಸುತ್ತಿದ್ದ ಅನಿರ್ಧಿಷ್ಟಾವದಿ ಮುಷ್ಕರ 3 ದಿನಕ್ಕೆ ಕಾಲಿಟ್ಟಿದ್ದು ಗುರುವಾರವೂ ಸಹ ಮುಷ್ಕರ ಮುಂದುವರಿಯಿತು.

ಸ್ಥಳಕ್ಕೆ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಭೇಟಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರು ಪಟ್ಟಣ ಪಂಚಾಯಿತಿ ಎದುರು ನಡೆಸುತ್ತಿದ್ದ ಅನಿರ್ಧಿಷ್ಟಾವದಿ ಮುಷ್ಕರ 3 ದಿನಕ್ಕೆ ಕಾಲಿಟ್ಟಿದ್ದು ಗುರುವಾರವೂ ಸಹ ಮುಷ್ಕರ ಮುಂದುವರಿಯಿತು.

ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಗುರುವಾರ ಭೇಟಿ ನೀಡಿ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರು ಹಾಗೂ ಇತರೆ ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ನೀರು ಗಂಟಿಗಳು ಸಹ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಪ್ಪದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡರು ಭೇಟಿ ನೀಡಿ ಬೆಂಬಲ ಸೂಚಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಪೌರ ನೌಕರರ ಸಂಘದ ಹೋರಾಟಕ್ಕೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಬೆಂಬಲ ಸೂಚಿಸಲಿದೆ. ಪೌರಕಾರ್ಮಿಕರು ಜನಸಾಮಾನ್ಯರಿಗೆ ಸಮಸ್ಯೆಯಾಗದ ರೀತಿಯಲ್ಲಿ ಪ್ರತಿಭಟನೆ ಮಾಡಬೇಕೆಂದು ಮನವಿ ಮಾಡಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಪೌರನೌಕರರ ಸಂಘದವರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಎಲ್ಲಾ ಸದಸ್ಯರ ಬೆಂಬಲವಿದೆ. ಪೌರಕಾರ್ಮಿಕರ ಬೇಡಿಕೆಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ್ದು ಸರ್ಕಾರದಿಂದ ಸ್ಪಂದನೆ ಸಿಗುವ ಸಾಧ್ಯತೆಯಿದೆ. ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಸಹಕಾರ ನೀಡಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಮುಕುಂದ ಮಾತನಾಡಿ, ಪೌರ ನೌಕರರ ಸಂಘದ ಆಶ್ರಯದಲ್ಲಿ ಎಲ್ಲಾ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಪೌರಾಡಳಿತ ಸಚಿವರು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ ಪೌರ ನೌಕರರ ಸಂಘದ ಬೇಡಿಕೆ ಈಡೇರಿಸಲು ಒತ್ತಾಯಿಸಬೇಕು. ಸರ್ಕಾರ ಹಂತ, ಹಂತವಾಗಿ ಕಾಯಂ ಮಾಡುವುದಾಗಿ ತಿಳಿಸಿದೆ. ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಸಹ ಸರ್ಕಾರ ಕಾಯಂ ಮಾಡಬೇಕೆಂದು ಆಗ್ರಹಿಸಿದರು.

ಡಿಎಸ್ ಎಸ್ ಜಿಲ್ಲಾ ಸಂಚಾಲಕ ಡಿ.ರಾಮು ಮಾತನಾಡಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಹಮ್ಮಿಕೊಂಡಿರುವ ಪೌರ ನೌಕರರ ಸಂಘಕ್ಕೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಲಿದೆ. ಪೌರಕಾರ್ಮಿಕರು ಸ್ವಚ್ಛತೆ ನಿಲ್ಲಿಸಿದ್ದಾರೆ. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಸಮಿತಿಯಿಂದಲೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಪೌರ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಪೌರ ನೌಕರರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ಹಲವು ಸಂಘ, ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಪೌರನೌಕರರ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಿ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಾಗುವುದು ಎಂದರು.ಪೌರನೌಕರರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಲಕ್ಷ್ಮಣಗೌಡ ಮಾತನಾಡಿದರು.ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ವಸೀಂ, ಮುನವರ್ ಪಾಷ,ದಲಿತ ಸಂಘರ್ಷ ಸಮಿತಿಯ ಪವಿತ್ರ, ಪಿಕಫ್ ಚಂದ್ರು, ವಿಜಯಕುಮಾರಿ, ವಾಲ್ಮೀಕಿ ಸಂಘದ ಮಂಜುನಾಥ್ ಮತ್ತಿತತರು ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.