ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹೀಗಾಗಿ ತೊಂದರೆಗೆ ಒಳಗಾದ ರೈತರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ. ಈ ಸಂಬಂಧ ಹಿರಿಯ ರೈತ ಮುಖಂಡ ಎಸ್. ಮಾದಶೆಟ್ಟಿ ಮಾತನಾಡಿ, ತಲತಲಾಂತರದಿಂದಲೂ ಈ ಭಾಗದಲ್ಲಿ ವಾಸ ಮಾಡುತ್ತಿರುವ ರೈತರು ಬಸವಾಪುರ ಮುಖ್ಯ ರಸ್ತೆಯಿಂದ ಚಿಕ್ಕ ಹೊಳೆ ಎಡದಂಡೆ ನಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಿರುಗಾಡುತ್ತಾ ಬಂದಿದ್ದೇವೆ, ಆದರೆ ನಂಜುಂಡ ಶೆಟ್ಟಿ, ಪಿಂಡಾರಿ ಮಹದೇವ ಶೆಟ್ಟಿ, ಶಿವಪ್ಪ ಹಾಗೂ ಮಹದೇವ ಶೆಟ್ಟಿ, ಎಂಬುವರು ಸೇರಿಕೊಂಡು ಗುರುವಾರ ಜೆಸಿಬಿ ಮೂಲಕ ರಸ್ತೆಯನ್ನು ಅಗೆಸಿ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ರೈತರು ಹಾಗೂ ಶಾಲೆಗೆ ತೆರಳುವ ಮಕ್ಕಳಿಗೆ ತಿರುಗಾಡಲು ಆಗದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ರೈತರಿಗೆ ದಾರಿ ಬಿಡಿಸಿ ಕೊಡಬೇಕೆಂದು ತಾವು ಹಾಗೂ ಇತರ ರೈತರು ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಲಾಗಿತ್ತು, ಆದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ, ಇದರಿಂದ ಜಮೀನಿನ ಮಾಲೀಕರೊಬ್ಬರು ತಿರುಗಾಡುವ ರಸ್ತೆ ತಮಗೆ ಸೇರಿದೆ ಎಂದು ಬೇಲಿ ಹಾಕುವ ಮೂಲಕ ತೊಂದರೆ ನೀಡಿದ್ದಾರೆ. ಇದರಿಂದ ರೈತರು ಉತ್ಪಾದಿಸುವ ಫಸಲುಗಳನ್ನು ಸಾಗಣಿಕೆ ಮಾಡಲು ಆಗುತ್ತಿಲ್ಲ, ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗುತ್ತಿಲ್ಲ, ಇರುವ ಒಂದೇ ರಸ್ತೆಯನ್ನು ಮುಚ್ಚಿರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಮಾದಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.ಧರಣಿಯಲ್ಲಿ ಗ್ರಾಮದ ರೈತರಾದ ಬಸವಣ್ಣಶೆಟ್ಟಿ, ಬಸಪ್ಪ, ಕುಮಾರ್, ಎಂ. ಕುಮಾರ್ ಸೇರಿದಂತೆ ಮಹಿಳೆಯರು ಮತ್ತು ಶಾಲಾ ಮಕ್ಕಳು ಇದ್ದರು.