ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಟೈಮ್ಸ್ ಪಿಯು ಕಾಲೇಜಿನಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ೮೯ ವಿದ್ಯಾರ್ಥಿಗಳಲ್ಲಿ ೫೪ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಉಳಿದ ೩೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಸಾಹಿತ್ಯ ರಾಜ್ಯಕ್ಕೆ ೧೨ನೇ ರ್ಯಾಂಕ್, ಪೂರ್ವಿಕ ೧೩ನೇ ರ್ಯಾಂಕ್, ಅಕ್ಷತಾ ೧೪ನೇ ರ್ಯಾಂಕ್ ಹಾಗೂ ಶೃಂಗ ಮತ್ತು ಸಿಂಚನಾ ಸಿ. ೧೫ನೇ ರ್ಯಾಂಕ್, ನಂದನಾ ೧೬ನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮ ಕಾಲೇಜಿನ ಮೇಲೆ ನಂಬಿಕೆಯಿಟ್ಟು ಪೋಷಕರು ಕಳುಹಿಸಿದ್ದು ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ನಮ್ಮ ಕಾಲೇಜಿಗೆ ದಾಖಲಾಗಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪಠ್ಯದ ಜೊತೆಗೆ ಸಿಇಟಿ, ನೀಟ್, ಕೆಸಿಟಿಯಂತಹ ಕೋಚಿಂಗ್ ನಡೆಸಲಾಗುತ್ತಿದೆ. ನುರಿತ ಉಪನ್ಯಾಸಕರು, ಸುಸಜ್ಜಿತ ಪ್ರಯೋಗಾಲಯಗಳು ಸೇರಿದಂತೆ ಉತ್ತಮ ಸೌಲಭ್ಯಗಳನ್ನು ನಮ್ಮ ಕಾಲೇಜು ಹೊಂದಿದೆ. ಕಾಲೇಜು ಪ್ರಾರಂಭವಾಗಿ ಎರಡು ವರ್ಷವಾಗಿದ್ದು ಪ್ರಸ್ತುತ ದ್ವಿತೀಯ ಪಿಯುಸಿ ಫಲಿತಾಂಶ ನಮ್ಮ ಕಾಲೇಜಿನ ಮೊದಲ ಫಲಿತಾಂಶವಾಗಿದ್ದು, ಉಪನ್ಯಾಸಕರ ಶ್ರಮಕ್ಕೆ ತಕ್ಕ ಪ್ರತಿಫಲ ಮೊದಲ ವರ್ಷದಲ್ಲಿಯೇ ದೊರಕಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆಯುವತ್ತ ಶ್ರಮಿಸಲಿದ್ದೇವೆ. ಎಲ್ಲರ ಸಹಕಾರ, ಪ್ರೋತ್ಸಾಹದೊಂದಿಗೆ ಮುನ್ನಡೆದುಕೊಂಡು ಹೋಗುತ್ತಿದ್ದು ಪೋಷಕರ ಸಹಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಸಾಹಿತ್ಯ ಮತ್ತು ಪೂರ್ವಿಕಾರರನ್ನು ಸನ್ಮಾನಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಟೈಮ್ಸ್ ಕಾಲೇಜಿನ ಆಡಳಿತಾಧಿಕಾರಿ ಅನೂಪ್, ಪ್ರಾಂಶುಪಾಲ ಬಿ. ಪ್ರದೀಪ್, ಉಪನ್ಯಾಸಕ ಯೋಗೀಶ್ ಹಾಗೂ ಮತ್ತಿತರರಿದ್ದರು.