ಕನ್ನಡಪ್ರಭ ವಾರ್ತೆ ಹಲಗೂರುಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ನಂಜಾಪುರ ಗ್ರಾಮದ ನಾಗಮುತ್ತು ಅವರ ಹಿರಿಯ ಪುತ್ರ 6 ವರ್ಷದ ಎನ್. ಲೋಕೇಶ್ ಎಂಬ ಬಾಲಕನ ಚಿಕಿತ್ಸೆಗಾಗಿ ಬ್ಯಾಡರಹಳ್ಳಿ ಗ್ರಾಪಂ ಸದಸ್ಯ, ಗೊಲ್ಲರಹಳ್ಳಿಯ ರಾಜೇಶ್ 25 ಸಾವಿರ ರು. ನೆರವು ನೀಡಿ ಮಾನವೀಯತೆ ಮೆರೆದರು.
ನಂತರದ ಚಿಕಿತ್ಸೆಗಾಗಿ ಈತನನ್ನು ಮೈಸೂರಿನ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿದೆ. ಅಲ್ಲಿ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ಖರ್ಚಾಗುತ್ತದೆ ಎಂಬ ವಿಷಯ ತಿಳಿದು ಗ್ರಾಪಂ ಸದಸ್ಯ ರಾಜೇಶ್ 25 ಸಾವಿರ ರು. ನೆರವು ನೀಡಿದ್ದಾರೆ.
ಬಾಲಕನ ತಂದೆ ನಾಗಮುತ್ತು ಮಾತನಾಡಿ, ಬಡತನದಲ್ಲಿ ಜೀವನ ನಡೆಸುತ್ತಿದ್ದ ನನಗೆ ರಾಜೇಶ್ ಆರ್ಥಿಕ ಸಹಾಯ ಮಾಡಿದ್ದಾರೆ. ಇದಕ್ಕೆ ಅಭಾರಿಯಾಗಿದ್ದೇನೆ ಎಂದರು.ಗ್ರಾಪಂ ಸದಸ್ಯ ರಾಜೇಶ್ ಮಾತನಾಡಿ, ಗ್ರಾಪಂ ಸಿಬ್ಬಂದಿ ಪುತ್ರ ಲೋಕೇಶ್ ಮಹಾಮಾರಿ ಬ್ಲಡ್ ಕ್ಯಾನ್ಸರ್ ಪೀಡಿತ ಎಂಬ ವಿಷಯ ತಿಳಿದು ನನಗೆ ತುಂಬಾ ನೋವಾಗಿದೆ. ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿರುವ ನಾಗಮುತ್ತು ಅವರ ಕಷ್ಟವನ್ನು ನಾನು ಅರಿತಿದ್ದು, ಅದಕ್ಕಾಗಿ ಧನ ಸಹಾಯ ಮಾಡಿದ್ದೇನೆ. ದಾನಿಗಳು ಇವರ ಕಷ್ಟಕ್ಕೆ ನೆರವಾಗುವಂತೆ ಮನವಿ ಮಾಡಿದರು.
ಈ ವೇಳೆ ಅನಿಕೇತನ ಲಯನ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ್, ಸದಸ್ಯರಾದ ಆನಂದ್, ಗ್ರಾಮದ ಪುಟ್ಟಸ್ವಾಮಿ, ನಾಗ, ಆನಂದ, ಸಿದ್ದರಾಜು, ಸೀನಾ, ದೇವರಾಜು, ಸೇರಿದಂತೆ ಇತರರು ಇದ್ದರು.