ರಾಣಿಬೆನ್ನೂರು: ಬಟ್ಟೆ ತೊಳೆಯಲು ತುಂಗಭದ್ರಾ ನದಿಗೆ ತೆರಳಿದಾಗ ಕಾಲು ಜಾರಿ ಬಿದ್ದ ವೃದ್ಧರೊಬ್ಬರು ಸುಮಾರು 15 ಕಿಮೀ ದೂರ ಈಜಿಕೊಂಡು ಹೋಗಿ ಸ್ಥಳಿಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಮಂಗಳವಾರ ತಾಲೂಕಿನ ಐರಣಿ ಗ್ರಾಮದ ಬಳಿ ನಡೆದಿದೆ.
ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಊರಿನಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿರುವ ಹಾನಗಲ್ಲ ತಾಲೂಕು ಜಾನಗುಂಡಿ ಗ್ರಾಮದ ಮಹಿಳೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಜಾನಗುಂಡಿ ಗ್ರಾಮದ ಅನುಷಾ ಮಂಜುನಾಥ ಲಮಾಣಿ ಊರಿನಿಂದ ಬಹಿಷ್ಕಾರಕ್ಕೆ ಒಳಗಾದ ಮಹಿಳೆ. ಇವರನ್ನು ಅದೇ ಗ್ರಾಮದ ಸ್ವಜಾತಿ ಮುಖಂಡರೇ ಬಹಿಷ್ಕಾರ ಹಾಕಿದ್ದಾರೆ. ಊರಿನಲ್ಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ನೊಂದ ಮಹಿಳೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.ಅನುಷಾ ಲಮಾಣಿ ತಮ್ಮದೇ ಗ್ರಾಮದ ಮಂಗಳಮ್ಮ ಎಂಬ ವೃದ್ದೆ ಜತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲಸದ ವಿಚಾರವಾಗಿ ಮಂಗಳಮ್ಮನಿಗೆ ಫೋನ್ ಮಾಡಿದಾಗ ಮಂಗಳಮ್ಮ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ಮಂಗಳಮ್ಮನ ಮನೆಯವರಿಗೆ ಫೋನ್ ಮಾಡಿದ ಅನುಷಾ ಮಂಗಳಮ್ಮ ನನ್ನ ಕಾಲ್ ರಿಸೀವ್ ಮಾಡುತ್ತಿಲ್ಲ, ಸತ್ತ ಹೋದ್ಲಾ ಎಂದು ಪ್ರಶ್ನಿಸಿದ್ದಾಳೆ.ಇದೇ ಕಾರಣಕ್ಕೆ ಊರಿನ ಲಂಬಾಣಿ ಸಮಾಜದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ ಎಂದು ಅನುಷಾ ಆರೋಪಿಸಿದ್ದಾರೆ. ಜಾನಗುಂಡಿ ಗ್ರಾಮದ ಸೋಮನಾಥ, ವಸಂತ, ಉಮ್ಮಣ್ಣ, ಪೋಮಣ್ಣ ಎಂಬುವವರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ಯಾರೂ, ಯಾವ ರೈತರೂ ನನಗೆ ಕೆಲಸ ಕೊಡಬಾರದು ಎಂದು ತಾಕೀತು ಮಾಡಿದ್ದಾರೆ. ಇದರಿಂದ ಮನನೊಂದಿದ್ದೇನೆ. ಈ ಕುರಿತು ಹಾನಗಲ್ಲ ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸಲಿಲ್ಲ. ಹೀಗಾಗಿ ಎಸ್ಪಿ ಕಚೇರಿಗೆ ಬಂದು ಲಿಖಿತ ದೂರು ನೀಡಿದ್ದಾರೆ.