ಸೋಮರಡ್ಡಿ ಅಳವಂಡಿ ಕೊಪ್ಪಳ
ಇದು ಯಾವುದೋ ಹಳೆಯ ಸಿನಿಮಾದಲ್ಲಿರುವ ದೃಶ್ಯಾವಳಿಯಲ್ಲ. ಕೊಪ್ಪಳ ತಾಲೂಕಿನ ಕವಲೂರು, ಗುಡಿಗೇರಿ ಸೇರಿದಂತೆ ಕೆಲವೊಂದು ಗ್ರಾಮಗಳ ನಿತ್ಯದ ಗೋಳು.
ಹೌದು, ಪಕ್ಕದಲ್ಲಿಯೇ ಕೂಗಳತೆ ದೂರದಲ್ಲಿ ತುಂಗಭದ್ರಾ ನದಿ ಇದೆ. ಅಷ್ಟೇ ಯಾಕೆ ಊರ ಪಕ್ಕದಲ್ಲಿಯೇ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಾಯಿ ತೆರೆದುಕೊಂಡು ಕಾಲುವೆಗಳು ಇವೆ. ಮಳೆಗಾಲದಲ್ಲಿ ಬೇಡವೆಂದರೂ ನೀರು ಹರಿಯುತ್ತಲೇ ಇರುತ್ತದೆ. ಇವು ಅಕ್ಕಪಕ್ಕದ ಕೆರೆ ತುಂಬಿಸಿದರೂ ಕುಡಿಯುವ ನೀರಿನ ಗೋಳು ತಪ್ಪುತ್ತದೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಪ್ಪಳ ತಾಲೂಕಿನಲ್ಲಿ ಇಂದಿಗೂ ಕುಡಿಯುವ ನೀರಿನ ಗೋಳು ತಪ್ಪಿಲ್ಲ.ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಜನರು ಸುತ್ತಮುತ್ತಲು ಇರುವ ಕೆರೆಗೆ ಅಲೆದು ನೀರು ತರುತ್ತಾರೆ. ಅಷ್ಟಕ್ಕೂ ಇವರಿಗೆ ತುಂಗಭದ್ರಾ ನದಿಯಿಂದ ಬಹುಗ್ರಾಮ ಯೋಜನೆಯಲ್ಲಿ ನೀರು ಪೂರೈಕೆ ಇದೆಯಾದರೂ ಅವು ಗಬ್ಬುವಾಸನೆ ಇರುವುದರಿಂದ ನಾವು ಕೆರೆಯ ನೀರು ತರುತ್ತವೆ ಎನ್ನುತ್ತಾರೆ ಕವಲೂರು ಗ್ರಾಮಸ್ಥರು. ಶುದ್ಧ ನೀರು ಪೂರೈಕೆ ಮಾಡಿದರೆ ನಾವ್ಯಾಕೆ ಕೆರೆ ಸುತ್ತಿ ನೀರು ತರಬೇಕು ಎಂದು ಪ್ರಶ್ನೆ ಮಾಡುತ್ತಾರೆ.
ಇದು, ಇದೊಂದೇ ಗ್ರಾಮದ ಗೋಳಲ್ಲ, ಅಳವಂಡಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಪರಿಸ್ಥಿತಿ ಹೀಗೆಯೇ ಇದೆ. ಇಲ್ಲಿ ತುಂಗಭದ್ರಾ ನೀರು ಪೂರೈಕೆ ಅಷ್ಟಕ್ಕಷ್ಟೇ ಇರುವುದರಿಂದ ಜನರು ಹಳ್ಳ, ಕೊಳ್ಳ ಸುತ್ತಾಡಿ ಇಲ್ಲವೇ ಕೆರೆ ಸುತ್ತಾಡಿ ನೀರು ತರಬೇಕಾದ ಹೀನಾಯ ಸ್ಥಿತಿ ಇದೆ ಎನ್ನುವುದು ದುರಂತವೇ ಸರಿ.
ಜಿಲ್ಲೆಯಲ್ಲಿ ಏನೇನು ಸಮಸ್ಯೆ?: ಕೊಪ್ಪಳ ಜಿಲ್ಲೆಯಲ್ಲಿ 722 ವಸತಿ ಗ್ರಾಮಗಳು ಇದ್ದು, ಇದರಲ್ಲಿ 473 ಗ್ರಾಮಗಳಿಗೆ ಡಿಬಿಒಟಿ ಹಾಗೂ ಎಂವಿಎಸ್ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತದೆ. ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಆದರೆ, ಬೇಸಿಗೆಯ ಹಿನ್ನೆಲೆಯಲ್ಲಿ 122 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಇರವುದರಿಂದ ಇಲ್ಲಿ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ.
ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲ ಮತ್ತು ಪೂರೈಕೆ ಇದ್ದರೂ ಸಮರ್ಪಕ ಪೂರೈಕೆಯಾಗದೆ ಇರುವುದರಿಂದ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸುತ್ತಮುತ್ತಲೂ ಇರುವ ಕೆರೆ, ಇಲ್ಲವೇ ಖಾಸಗಿ ಪಂಪ್ಸೆಟ್ಗಳಿಗೆ ಸುತ್ತಾಡಿ ನೀರು ತರಬೇಕಾದ ಸ್ಥಿತಿ ಇರುವುದು ಮಾತ್ರ ಕಟುಸತ್ಯ.
ಅಯ್ಯೋ ಸಾರ್, ನಮ್ಮೂರಲ್ಲಿ ನೀರೇ ಇಲ್ಲ. ಕೆರೆಯೂ ಬತ್ತಿ ಹೋಗಿದೆ. ಅಷ್ಟೇ ಯಾಕೆ ಜಲಜೀವನ್ ಯೋಜನೆಯಲ್ಲಿಯೂ ನೀರು ಬರುತ್ತಿಲ್ಲ. ಹೀಗಾಗಿ, 6-8 ಕಿಮೀ ಸುತ್ತಾಡಿ, ಕೆರೆಯ ನೀರು ತರಬೇಕು. ಇದು ನಿತ್ಯವೂ ತಪ್ಪದ ಗೋಳು ಎಂದು ಗುಡಿಗೇರಿ ಗ್ರಾಮಸ್ಥ ಅಕ್ಬರ್ ತಿಳಿಸಿದ್ದಾರೆ.