ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಹಾಗೂ ಗೋಣಿಕೊಪ್ಪ ದಸರಾಗೆ ಸರ್ಕಾರದಿಂದ ಅನುದಾನವನ್ನು ಅಧಿಕೃತ ಘೋಷಿಸಲಾಗಿದ್ದು, ಮಡಿಕೇರಿ ದಸರಾಗೆ 75 ಲಕ್ಷ ರು. ಹಾಗೂ ಗೋಣಿಕೊಪ್ಪಕ್ಕೆ 50 ಲಕ್ಷ ರು. ಅನುದಾನವನ್ನು ಘೋಷಣೆ ಮಾಡಿದೆ. ದಸರಾಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅನುದಾನ ನೀಡಲಾಗುತ್ತಿದ್ದು, ನಿಗದಿತ ಉದ್ದೇಶಕ್ಕೆ ಮಾತ್ರ ಅನುದಾನ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಬಳಕೆಯಾದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಹಣ ಬಳಕೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಮಡಿಕೇರಿ ದಸರಾಕ್ಕೆ ಅ.15ರಂದು ಚಾಲನೆ ದೊರಕಲಿದೆ. ಅಂದು ಪಂಪಿನ ಕೆರೆ ಬಳಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಆರಂಭವಾಗುವ ಮೂಲಕ ದಸರಾಕ್ಕೆ ಅಧಿಕೃತ ಚಾಲನೆ ದೊರಕಲಿದೆ. ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ಅ.16ರಿಂದ 24ರ ವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಡಿಕೇರಿ ದಸರಾ ಉತ್ಸವಕ್ಕೆ 2 ಕೋಟಿ ರು. ಅನುದಾನ ನೀಡುವಂತೆ ಸಮಿತಿಯಿಂದ ನಿಯೋಗ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬರ ಹಿನ್ನೆಲೆಯಲ್ಲಿ ಈ ಬಾರಿ ದಸರೆಗೆ ಸರ್ಕಾರ 75 ಲಕ್ಷ ರು. ಅನುದಾನ ಘೋಷಿಸಿದೆ. ಕಳೆದ ಬಾರಿ 1 ಕೋಟಿ ಬಿಡುಗಡೆ:
ಮಡಿಕೇರಿ ದಸರಾ ಜನೋತ್ಸವಕ್ಕೆ ಕಳೆದ ವರ್ಷ ಸರ್ಕಾರ 1 ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಸರ್ಕಾರ 25 ಲಕ್ಷ ರು. ಅನುದಾನ ಇನ್ನೂ ಬಿಡುಗಡೆ ಮಾಡಿಲ್ಲ. ಈ ಬಾರಿ 75 ಲಕ್ಷ ರು. ಬಿಡುಗಡೆ ಮಾಡಿದೆ. ಗೋಣಿಕೊಪ್ಪ ದಸರಾಕ್ಕೆ ಕಳೆದ ಬಾರಿಯೂ 50 ಲಕ್ಷ ರು. ಅನುದಾನ ನೀಡಲಾಗಿತ್ತು.