ರವಿ ಮೇಗಳಮನಿ
ತಾಲೂಕಿನ ಬಡ ಜನರ ಹಸಿವು ನೀಗಿಸುವುದಕ್ಕಾಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸ್ಥಾಪಿಸಿಲಾಗಿದ್ದ ಇಂದಿರಾ ಕ್ಯಾಂಟೀನ್ ಅನುದಾನದ ಕೊರತೆಯಿಂದ ಬಂದ್ ಆಗಿದೆ.
ಪಟ್ಟಣಕ್ಕೆ ದೂರದ ಊರಿನಿಂದ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಪ್ರತಿ ದಿನ ಊಟ, ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನೇ ಅವಲಂಬಿಸಿದ್ದರು. ಆದರೆ ಈಗ ಅದು ಬಂದ್ ಆಗಿದ್ದು, ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಸುತ್ತಮುತ್ತಲಿನ ಹಳ್ಳಿಗಳಿಂದ ಸರ್ಕಾರಿ ಕಚೇರಿ ಕೆಲಸಕ್ಕೆ ಬರುವ ಬಡಜನರು ಇಂದಿರಾ ಕ್ಯಾಂಟೀನ್ ನಂಬಿಯೇ ಬರುತ್ತಿದ್ದು, ವಾಪಸ್ ನಿರಾಸೆಯಿಂದ ತೆರಳುವಂತಾಗಿದೆ.ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಪೂರೈಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಮೂಲಭೂತ ಸೌಕರ್ಯ ಒದಗಿಸಿದೆ. ಆದರೆ ಇಲ್ಲಿ ಅನುದಾನ ಸಿಗದೆ, ಸರಿಯಾದ ನಿರ್ವಹಣೆ ಇಲ್ಲದೇ ಕಾಂಟೀನ್ ಅವ್ಯವಸ್ಥೆಯ ಆಗರವಾಗಿತ್ತು. ಜತೆಗೆ ಅಡುಗೆ ಸಿಬ್ಬಂದಿಗೆ ವೇತನ ಪಾವತಿಸದ ಹಿನ್ನೆಲೆ ಕ್ಯಾಂಟೀನ್ನ ಬಾಗಿಲು ಮುಚ್ಚಲಾಗಿದೆ.
ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಕ್ಯಾಂಟೀನ್ ಪುನಾರಂಭದ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಬರಬೇಕು. ಸದ್ಯ ಬೇರೆಯವರಿಗೆ ಟೆಂಡರ್ ಆಗಿದೆ. ಅಡುಗೆ ಮಾಡುವವರ ವೇತನವನ್ನು ಗುತ್ತಿಗೆದಾರರು ನೀಡಿಲ್ಲ. ಹಾಗಾಗಿ ಕ್ಯಾಂಟೀನ್ ಬಂದ್ ಮಾಡಲಾಗಿದೆ ಎನ್ನುತ್ತಾರೆ ಅಡುಗೆ ಸಿಬ್ಬಂದಿ ನವೀನಕುಮಾರ ಪೂಜಾರ.