ಕಾರವಾರ: ರಾಜ್ಯದಲ್ಲಿ ಈ ಬಾರಿ 82 ಲಕ್ಷ ಹೆ.ನಲ್ಲಿ ಬಿತ್ತನೆ ಮಾಡುವ ಗುರಿ ಇದ್ದು, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಸಚಿವ ಎನ್.ಚಲವರಾಯ ಸ್ವಾಮಿ ತಿಳಿಸಿದರು.
ಮಂಗಳವಾರ ಹಳಿಯಾಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ 153 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದ್ದು, ಈ ಬಾರಿ ಕೂಡಾ ನಿಗದಿತ ಗುರಿ ಸಾಧಿಸಲಾಗುವುದು. ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು ಈಗಾಗಲೇ ಶೇ. 25 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಜುಲೈ ವೇಳೆಗೆ ಬಿತ್ತನೆ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದರು.ರಾಜ್ಯದಲ್ಲಿ ಪ್ರಸ್ತುತ ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಕಂಡುಬoದಿಲ್ಲ, ಹೆಚ್ಚುವರಿ ಅಗತ್ಯತೆ ಕಂಡುಬಂದಲ್ಲಿ ತಕ್ಷಣ ಪೂರೈಕೆ ಮಾಡಲಾಗುವುದು. ಪ್ರಸ್ತುತ 2.89 ಲಕ್ಷ ಮೆಟ್ರಿಕ್ ಟನ್ ಬಿತ್ತನೆ ಬೀಜ ಮತ್ತು 9.79 ಲಕ್ಷ ಟನ್ ರಸಗೊಬ್ಬರದ ದಾಸ್ತಾನು ಲಭ್ಯವಿದ್ದು ಮುಂಗಾರು ಹಂಗಾಮಿಗೆ ಅಗತ್ಯವಿರುವ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸುತ್ತಿದ್ದು ಕಳೆದ 2 ವರ್ಷದಲ್ಲಿ ₹1000 ಕೋಟಿಗೂ ಅಧಿಕ ಮೊತ್ತದ ಸಬ್ಸಿಡಿ ವಿತರಣೆ ಮಾಡಲಾಗಿದೆ ಎಂದರು.ರಾಜ್ಯದ ಎಲ್ಲ ರೈತರು ತಮ್ಮ ಬೆಳೆಗಳಿಗೆ ತಪ್ಪದೇ ವಿಮೆ ಮಾಡಿಸುವಂತೆ ತಿಳಿಸಿದ ಸಚಿವರು, ವಿಮಾ ಮೊತ್ತದ ಶೇ. 2 ರಷ್ಟು ಮಾತ್ರ ರೈತರು ಪಾವತಿಸಬೇಕು ಬಾಕಿ ಮೊತ್ತವನ್ನು ಸರ್ಕಾರ ಪಾವತಿಸಲಿದ್ದು, ವಿಮಾ ಪರಿಹಾರದ ಸಂಪೂರ್ಣ ಮೊತ್ತ ರೈತರಿಗೆ ದೊರೆಯಲಿದೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಉಪಸ್ಥಿತರಿದ್ದರು.