ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಕೊನೇ ದಿನವಾದ ಶನಿವಾರ ಧರ್ಮ ಧ್ವಜಾವರೋಹಣ, ಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾಪೂಜೆ, ಅವಭೃತ ಸ್ನಾನ, ಮಹಾಭಿಷೇಕ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಕಳೆದ 9 ದಿನಗಳಿಂದ ನಡೆದ ಜಾತ್ರಾಮಹೋತ್ಸವ ಮುಕ್ತಾಯಗೊಂಡಿತು.ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶನಿವಾರ ಶ್ರೀಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾಪೂಜೆ, ಅವಭೃತ ಸ್ನಾನ ಮತ್ತು ಮಹಾಭಿಷೇಕ ಕಾರ್ಯಕ್ರಮದಲ್ಲಿ ಕ್ಷೇತ್ರಾಧಿದೇವತೆಗಳಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಅವಭೃತ ಸ್ನಾನ ಎಂದರೇನು:ಕಳೆದ 9 ದಿನಗಳಿಂದ ನಡೆದ ಎಲ್ಲಾ ಕಾರ್ಯಕ್ರಮಗಳು ದೇವರ ಕರುಣೆಯಿಂದ ಪರಿಪೂರ್ಣಗೊಂಡಿವೆ. ದೇವರ ಸೇವಾ ಕೈಂಕರ್ಯಗಳನ್ನು ಮಾಡಲು ಸಿಕ್ಕ ಅವಕಾಶಗಳಿಗೆ ಪ್ರತೀಕವಾಗಿ ಎಲ್ಲವೂ ಮುಗಿದ ಮೇಲೆ ಅವಭೃತ ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಪ್ರಾರ್ಥಿಸುವ ಮೂಲಕ 9 ದಿನಗಳ ಕಾಲ ನಡೆದ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಕಾಯಾ, ವಾಚಾ, ಮನಸಾ, ಇಂದ್ರೀಯ ಬುದ್ದೇ ಇವುಗಳಲ್ಲಿ ಯಾವುದಾದರೂ ಸಮಸ್ಯೆ, ತಪ್ಪು ನಪ್ಪುಗಳು ನಡೆದಿದ್ದರೆ ನಮ್ಮನ್ನು ಕ್ಷಮಿಸು ಭಗವಂತ ಎಂದು ದೇವರಲ್ಲಿ ಮೊರೆಯಿಟ್ಟು ಪ್ರಾರ್ಥಿಸುವುದನ್ನೇ ಅವಭೃತ ಸ್ನಾನ ಎಂದು ಹೇಳಲಾಗುತ್ತದೆ.
ಜಾತ್ರಾ ಮಹೋತ್ಸವದ ಕೊನೆ ದಿನದ ಧಾರ್ಮಿಕ ವಿಧಿ ವಿಧಾನಗಳ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಆಶೀರ್ವಚನ ನೀಡಿದರು.ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಕ್ಷೇತ್ರದ ಚೈತನ್ಯನಾಥಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ಭಕ್ತರು ಇದ್ದರು.
ಶನೇಶ್ವರ ಪೂಜಾರಾಧನೆಕಿಕ್ಕೇರಿ: ಭಾರತೀಪುರದ ಶ್ರೀ ಶನೈಶ್ಚರನದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇವಾಲಯದ ಅರ್ಚಕ ದರ್ಶನ್ ಮಾತನಾಡಿ, ಎಲ್ಲ ಶಕ್ತಿಗೂ ಶುಭಕಾರಕನಾಗಿ ಶನಿದೇವರು ಇದ್ದು, ಭಕ್ತಿಯಿಂದ ಆರಾಧಿಸಿದರೆ ಸರ್ವ ಸಿದ್ಧಿ ಖಚಿತ. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡು ಪೂಜಿಸಿದರೆ ಫಲಾಫಲ ಸಿಗಲಾರದು. ಮಾನಸಿಕ ತಾಮಸಗುಣ, ಅನಿಷ್ಟಗಳು ದೂರವಾಗಲು ಮುಕ್ತಿಯೊಂದೇ ಸನ್ಮಾರ್ಗವಾಗಿದೆ. ಇದು ಭಗವಂತನ ಆರಾಧನೆಯಿಂದ ಮಾತ್ರ ಸಿಗಲಿದೆ ಎಂದರು.
ದೇಗುಲದಲ್ಲಿ ಪೂಜಾ ಮಹೋತ್ಸವ, ಹೋಮ, ಪಂಚಾಮೃತ ಅಭಿಷೇಕ,ಗಂಗಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದವು. ರುದ್ರ ಪ್ರಸಾದ್ ಮತ್ತು ಸಂಗಡಿಗರಿಂದ ವೀರಭದ್ರ ಕುಣಿತ,ಚಿಟ್ಟಿ ಮೇಳ, ವಾದ್ಯಗೋಷ್ಠಿಗಳು ರಂಜಿಸಿದವು.ಶನೈಶ್ಚರನ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತಾದಿಗಳ ಸಹಕಾರದೊಂದಿಗೆ ಅನ್ನಸಂತರ್ಪಣೆ ನಡೆಯಿತು.