ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.96 ಮತದಾನ

KannadaprabhaNewsNetwork | Published : Feb 17, 2024 1:19 AM

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಶೇಕಡ 96.02 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಶೇಕಡ 96.02 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.

ಜಿಲ್ಲೆಯ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದ ಮತದಾನ ಕೇಂದ್ರದಲ್ಲಿ 458 ಮತದಾರರಲ್ಲಿ 437 ಮತದಾರರು ಮತ ಚಲಾಯಿಸಿದ್ದು ಶೇ.95.41 ರಷ್ಟು ಮತದಾನವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿ ಮತದಾನ ಕೇಂದ್ರದಲ್ಲಿ 112 ಮತದಾರರಿದ್ದು 106 ಮತದಾರರು ಮತ ಚಲಾಯಿಸಿದ್ದು ಶೇ.94.64 ಮತದಾನವಾಗಿದೆ.

ಅದೇ ರೀತಿ ದೇವನಹಳ್ಳಿ ಟೌನ್ ನ ಮತದಾನ ಕೇಂದ್ರದಲ್ಲಿ 496 ಮತದಾರ ಪೈಕಿ 465 ಮತ ಚಲಾಯಿಸಿದ್ದು ಶೇ.93.75 ರಷ್ಟು ಮತದಾನವಾಗಿದೆ. ಹೊಸಕೋಟೆ ಟೌನ್ ನ ಮತದಾನ ಕೇಂದ್ರದಲ್ಲಿ 563 ಮತದಾರರ ಪೈಕಿ 554 ಮತದಾರರು ಮತ ಚಲಾಯಿಸಿದ್ದು ಶೇ.98.40 ಮತದಾನವಾಗಿದೆ. ನೆಲಮಂಗಲ ಟೌನ್ ಮತದಾನ ಕೇಂದ್ರದಲ್ಲಿ 382 ಮತದಾರರ ಪೈಕಿ 368 ಮತದಾರರು ಮತ ಚಲಾಯಿಸಿದ್ದು ಶೇ.96.34 ಮತದಾನವಾಗಿದೆ. ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಮತದಾನ ಕೇಂದ್ರದಲ್ಲಿ 177 ಮತದಾರರ ಪೈಕಿ 171 ಮತ ಚಲಾಯಿಸಿದ್ದು ಶೇ.96.61 ಮತದಾನವಾಗಿದೆ.

ಒಟ್ಟಾರೆ 1163 ಪುರುಷರು, 1025 ಮಹಿಳೆಯರು ಸೇರಿ ಒಟ್ಟು 2188 ಶಿಕ್ಷಕ ಮತದಾರರು ಅಂತಿಮ ಪಟ್ಟಿಯಲ್ಲಿ ಇದ್ದು, ಅದರಲ್ಲಿ 1120 ಪುರುಷರು, 981 ಮಹಿಳೆಯರು ಸೇರಿ ಒಟ್ಟಾರೆ 2101 ಮತದಾರರು ಮತ ಚಲಾಯಿಸಿದ್ದಾರೆ ಎಂದು ವಿವರಿಸಿದ್ದಾರೆ.

ಮತಕೇಂದ್ರಗಳ ಬಳಿ ಪ್ರಚಾರದ ಅಬ್ಬರ:

ಜಿಲ್ಲೆಯ ವಿವಿಧ ತಾಲೂಕುಗಳ ಮತಗಟ್ಟೆಗಳ ಬಳಿ ಶಿಕ್ಷಕ ಮತದಾರರನ್ನು ಅಂತಿಮ ಹಂತದಲ್ಲಿ ಓಲೈಸುವ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದ್ದ ದೃಶ್ಯ ಕಂಡು ಬಂತು. ಈ ಬಾರಿ ಸ್ಪರ್ಧೆಯಲ್ಲಿ ಒಟ್ಟು 9 ಮಂದಿ ಇದ್ದರೂ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿ ಪುಟ್ಟಣ್ಣ ಹಾಗೂ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಎ.ಪಿ.ರಂಗನಾಥ್‌ ನಡುವೆ ತೀವ್ರ ಹಣಾಹಣೆ ಏರ್ಪಟ್ಟಿದೆ. ಕಳೆದ 3 ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲೂ ಇಬ್ಬರೂ ಅಭ್ಯರ್ಥಿಗಳು ಮುಖಾಮುಖಿಯಾಗಿದ್ದರು. ಆಗ ಬಿಜೆಪಿ ಬೆಂಬಲದಿಂದ ಸ್ಪರ್ಧಿಸಿದ್ದ ಪುಟ್ಟಣ್ಣ, ಜೆಡಿಎಸ್‌ನ ಬೆಂಬಲಿತ ಅಭ್ಯರ್ಥಿಯಾಗಿದ್ದ ರಂಗನಾಥ್‌ರನ್ನು ಸೋಲಿಸಿದ್ದರು.

ಈಗ ಬದಲಾದ ರಾಜಕೀಯ ಮೇಲಾಟಗಳ ಪರಿಣಾಮ ಪುಟ್ಟಣ್ಣ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ವಿಧಾನಸಭೆ ಪ್ರವೇಶಿಸುವ ವಿಫಲ ಯತ್ನದ ಬಳಿಕ ಮತ್ತೊಮ್ಮೆ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗುವ ಆಕಾಂಕ್ಷೆಯಿಂದ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಉಮೇದುವಾರರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಸಾಧಿಸಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಎ.ಪಿ.ರಂಗನಾಥ್‌ ಅವರು ಮೈತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಬಿಜೆಪಿ -ಜೆಡಿಎಸ್‌ ನಡುವೆಯೇ ಬಹುತೇಕ ಮತಗಳು ಹಂಚಿ ಹೋಗಿದ್ದವು ಎಂಬುದು ಇತಿಹಾಸ. ಈ ಬಾರಿ ಏನಾಗಲಿದೆ ಎಂಬುದರ ಕುರಿತ ಪ್ರಶ್ನೆಗೆ ಭಾನುವಾರ ಉತ್ತರ ದೊರೆಯಲಿದೆ.16ಕೆಡಿಬಿಪಿ4-

ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

Share this article