ವಸತಿ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಪ್ರಯೋಗಾಲಯ ಉದ್ಘಾಟಿಸಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹೯೭೦ ಕೋಟಿ ವೆಚ್ಚದಲ್ಲಿ ತಾಲೂಕಿನ ೩೮ ಹೊಸ ಕೆರೆ ನಿರ್ಮಾಣ ಹಾಗೂ ಕೆರೆ ತುಂಬಿಸುವ ಬೃಹತ್ ಯೋಜನೆಗೆ ಅನುಮತಿ ನೀಡಿದ್ದು, ಕ್ಷೇತ್ರದ ಜನರ ಪರವಾಗಿ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಗಾಣದಾಳ, ಗುನ್ನಾಳ ಗ್ರಾಮಗಳಲ್ಲಿ ಗುರುವಾರ ಪಶು ಆಸ್ಪತ್ರೆಗೆ ಶಂಕುಸ್ಥಾಪನೆ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಪ್ರಯೋಗಾಲಯಗಳ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆಕಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರವರಿಂದ ಚಾಲನೆ ಕೊಡಿಸುತ್ತೇನೆ ಎಂದರು.ತಳಕಲ್ ಗ್ರಾಮದಲ್ಲಿ ನನ್ನ ಸ್ವಂತ ೨೫ ಎಕರೆ ಜಮೀನು ಕೊಟ್ಟಿದ್ದು, ಸುಸಜ್ಜಿತ ಮಾದರಿಯ ಎಂಜಿನಿಯರಿಂಗ್ ಕಾಲೇಜು ನಿರ್ಮಿಸಲಾಗಿದೆ. ಅಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಾಗಿದೆ. ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಈ ಭಾಗದ ಬಡಮಕ್ಕಳು ಪ್ರಗತಿ ಸಾಧಿಸಬೇಕು ಹಾಗೂ ಕ್ಷೇತ್ರದ ಜನರ ಅಭಿವೃದ್ಧಿ ಹೊಂದಬೇಕು ಎನ್ನುವ ಕನಸು ಇಟ್ಟುಕೊಂಡು ನಾನು ಹಗಲುರುಳುನ್ನದೆ ಸರ್ಕಾರದಿಂದ ಸಾಕಷ್ಟು ಅನುದಾನ ತರುವ ಮೂಲಕ ನಾನಾ ಯೋಜನೆಗಳನ್ನು ತಾಲೂಕಿಗೆ ತರುವ ಪ್ರಾಮಾಣಿಕ ಪ್ರಯತ್ನ ನನ್ನದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಪಶು ವೈದ್ಯಾಧಿಕಾರಿ ಡಾ. ಮಲ್ಲಯ್ಯ, ತಾಲೂಕು ಪಶುವೈದ್ಯಾಧಿಕಾರಿ ಡಾ. ಪ್ರಕಾಶ ಚೂರಿ, ಡಾ. ಸಂಜಯ್ ಚಿತ್ರಗಾರ, ವಿನೋದ, ಬಿಸಿಎಂ ಜಿಲ್ಲಾ ಅಧಿಕಾರಿ ನಾಗಮಣಿ, ಬಿಸಿಎಂ ತಾಲೂಕು ಅಧಿಕಾರಿ ಶಿವಶಂಕರ ಕರಡಕಲ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಯ್ಯ ಮಾಲಗಿತ್ತಿ, ಚಂದ್ರಶೇಖರ, ಕೃಷ್ಣ ಜಲನಿಗಮ ಅಧಿಕಾರಿ ಚನ್ನಪ್ಪ ಹಾಗೂ ಮುಖಂಡರಾದ ರಾಘವೇಂದ್ರ ಜೋಶಿ, ರುದ್ರಪ್ಪ ಮರ್ಕಟ್, ಅಪ್ಪಣ್ಣ ಜೋಶಿ, ಡಾ. ಶಿವನಗೌಡ ದಾನರಡ್ಡಿ, ಬಸವರಾಜ ಹಿರೇಮನಿ, ಮಲ್ಲು ಜಕ್ಕಲಿ, ಮಂಜುನಾಥ ಸಜ್ಜನ, ಆದೇಶ ರೊಟ್ಟಿ, ಬಸವರಾಜ ಬಂಗಾರಿ, ಹನುಮಂತ ಇದ್ದರು.