
ಕೇಂದ್ರ ಸರಕಾರದ ಮಾನದಂಡ ಆಧರಿಸಿ ಕ್ರಮ । ಸೌಲಭ್ಯಕ್ಕಾಗಿ ಪಡೆದ ಬಿಪಿಎಲ್ ಕಾರ್ಡ್ಗಳಿಗೆ ಕಡಿವಾಣರಾಘು ಕಾಕರಮಠ
ಆದಾಯ ತೆರಿಗೆ ಪಾವತಿಸುತ್ತಿದ್ದರೂ ಅಥವಾ ಸರಕಾರಿ ನೌಕರಿಯಲ್ಲಿದ್ದರೂ ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ 988 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಕೇಂದ್ರ ಸರಕಾರದ ಮಾನದಂಡ ಆಧರಿಸಿ ತಾಲೂಕಿನಲ್ಲಿ ರದ್ದುಪಡಿಸಲಾಗಿದೆ.
ಕಳೆದ ಆರು ತಿಂಗಳುಗಳಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ, ಎಪಿಎಲ್ ಚೀಟಿಯಾಗಿ ಪರಿವರ್ತಿಸಲಾಗಿದೆ. ಆಪರೇಷನ್ ಬಿಪಿಎಲ್ ಹೆಸರಿನಡಿ ನಡೆದ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.ತಾಲೂಕಿನಲ್ಲಿ 24958 ಅಂತ್ಯೋದಯ ಹಾಗೂ ಬಿಪಿಎಲ್ ಫಲಾನುಭವಿಗಳಾಗಿದ್ದರು. ಇದರಲ್ಲಿ 988 ಕಾರ್ಡ್ ರದ್ದಾಗಿ ಎಪಿಎಲ್ ಆಗಿ ಪರಿವರ್ತನೆಯಾಗಿದ್ದು, ಇನ್ನು ಸಹ ಅನರ್ಹರ ಪತ್ತೆ ಮುಂದುವರೆದಿದೆ. ಸದ್ಯ 6188 ಕುಟುಂಬಗಳು ಎಪಿಎಲ್ ಕಾರ್ಡ್ ಪಡೆದಿದ್ದಾರೆ.
ಆಪರೇಷನ್ ಬಿಪಿಎಲ್ ಸರಕಾರಕ್ಕೆ ವರದಾನವಾದರೆ. ಪಡಿತರ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವರು ಪಡಿತರ ಪಡೆಯುವುದಕ್ಕಿಂತ ಆಸ್ಪತ್ರೆ ಸೌಲಭ್ಯ ಹಾಗೂ ವಿವಿಧ ಸರಕಾರಿ ಸವಲತ್ತು ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿದ್ದರು. ಈಗ ಅವುಗಳೆಲ್ಲ ಕೈತಪ್ಪಿವೆ.ವಾಪಸ್ ಪಡೆಯಲು ಅವಕಾಶ:
ಅರ್ಹತೆ ಇದ್ರೂ ವಾರ್ಷಿಕ ಆದಾಯದ ಗೊಂದಲದಿಂದಾಗಿ ಕಾರ್ಡ್ ಗಳು ರದ್ದಾಗಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿ ಅಥವಾ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು. ತಾಲೂಕಿನಲ್ಲಿ ಕಾರ್ಡ್ ರದ್ದಾದ ಸಾಕಷ್ಟು ಜನರು ಮತ್ತೆ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳನ್ನು ಪರಿಶೀಲಿಸಿ ವಾಪಸ್ ನೀಡುವ ಚಿಂತನೆಯು ನಡೆದಿದೆ.ರದ್ದಾಗಲು ಕಾರಣ:
ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು, ಜಿಎಸ್ಟಿ ಪಾವತಿದಾರರು, ರಾಜ್ಯದಲ್ಲೇ ಎರಡೆರಡು ಪಡಿತರ ಚೀಟಿ ಇರುವವರು, 6ರಿಂದ 12 ತಿಂಗಳ ಅವಧಿಯಲ್ಲಿ ಒಮ್ಮೆಯೂ ಪಡಿತರ ಪಡೆಯದವರು, 7.5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ.ರದ್ದುಪಡಿಸುವ ಪ್ರಕ್ರಿಯೆ ನಿರಂತರಅನರ್ಹ ಬಿಪಿಎಲ್ ಕಾರ್ಡ್ ಕೇಂದ್ರ ಸರಕಾರವೇ ಗುರುತಿಸಿದೆ. ರಾಜ್ಯ ಸರಕಾರದ ಕುಟುಂಬ ತಂತ್ರಾಂಶದ ಪ್ರಕಾರವೂ ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿವೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಸರಕಾರದ ಪಡಿತರ ಯೋಜನೆಯ ಲಾಭ ಪಡೆದುಕೊಂಡಿರುವ ಫಲಾನುಭವಿಗಳಿಗೆ ದಂಡ ವಿಧಿಸುವ ಬಗ್ಗೆ ಆಹಾರ ಇಲಾಖೆ ನಿಯಮಗಳನ್ನು ರೂಪಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ.