ಹಣಕೋಣದಲ್ಲಿ ಅಪರಿಚಿತರಿಂದ ಉದ್ಯಮಿ ಕೊಲೆ

KannadaprabhaNewsNetwork |  
Published : Sep 23, 2024, 01:18 AM IST
ವಿನಾಯಕ ನಾಯ್ಕ | Kannada Prabha

ಸಾರಾಂಶ

ಭಾನುವಾರ ನಸುಕಿನ 5.30 ಗಂಟೆಗೆ ಕಾರಿನಲ್ಲಿ ಆಗಮಿಸಿದ ಹಂತಕರು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿದ್ದ ವಿನಾಯಕ ನಾಯ್ಕ ಅವರನ್ನು ತಲ್ವಾರ್, ಚಾಕು, ರಾಡ್‌ನಿಂದ ಹತ್ಯೆ ಮಾಡಿದ್ದಾರೆ. ಪತ್ನಿ ವೃಷಾಲಿ ಅವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಅವರ ತಲೆ ಹಾಗೂ ಕೈಗೆ ಏಟು ಬಿದ್ದಿದೆ.

ಕಾರವಾರ: ತಾಲೂಕಿನ ಹಣಕೋಣದಲ್ಲಿ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅವರ ಪತ್ನಿಯನ್ನೂ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಘಟನೆಯಿಂದ ಬೆಳ್ಳಂಬೆಳಗ್ಗೆ ಕಾರವಾರದ ಜನತೆ ಬೆಚ್ಚಿಬೀಳುವಂತಾಗಿದೆ. ವಿನಾಯಕ ನಾಯ್ಕ (55) ಹತ್ಯೆಗೊಳಗಾದವರು.

ಭಾನುವಾರ ನಸುಕಿನ 5.30 ಗಂಟೆಗೆ ಕಾರಿನಲ್ಲಿ ಆಗಮಿಸಿದ ಹಂತಕರು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿದ್ದ ವಿನಾಯಕ ನಾಯ್ಕ ಅವರನ್ನು ತಲ್ವಾರ್, ಚಾಕು, ರಾಡ್‌ನಿಂದ ಹತ್ಯೆ ಮಾಡಿದ್ದಾರೆ. ಪತ್ನಿ ವೃಷಾಲಿ ಅವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಅವರ ತಲೆ ಹಾಗೂ ಕೈಗೆ ಏಟು ಬಿದ್ದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂತಕರು ಚಾಕು ಹಾಗೂ ರಾಡ್‌ಗಳನ್ನು ವಿನಾಯಕ ನಾಯ್ಕ ಅವರ ಮನೆಯ ಆವರಣದಲ್ಲಿ ಬಿಸಾಡಿ ಹೋಗಿದ್ದಾರೆ. ಹತ್ಯೆಗೆ ಕಾರಣ ತನಿಖೆಯಿಂದ ತಿಳಿದುಬರಬೇಕಾಗಿದೆ.ಮೂಲತಃ ಹಣಕೋಣದವರಾದ ವಿನಾಯಕ ನಾಯ್ಕ ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉದ್ಯಮ ಹೊಂದಿದ್ದರು. ಹಣಕೋಣದ ಸಾತೇರಿ ದೇವಿಯ ಜಾತ್ರೆಗೆ ಆಗಮಿಸಿದ್ದ ಅವರು ತಮ್ಮ ನಿವಾಸದಲ್ಲಿ ತಂಗಿದ್ದು, ಭಾನುವಾರ ಪುಣೆಗೆ ಹೊರಡುವ ಗಡಿಬಿಡಿಯಲ್ಲಿ ಇದ್ದರು. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ₹6 ಲಕ್ಷ ಮೌಲ್ಯದ ಚರಸ್‌, ಆರೋಪಿ ವಶ

ಗೋಕರ್ಣ: ಭಾನುವಾರ ಇಲ್ಲಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರು ಲಕ್ಷ ರು. ಮೌಲ್ಯದ ಚರಸ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.ಪಿಎಸ್ಐ ಖಾದರ ಬಾಷಾ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಪಿಐ ವಸಂತ ಆಚಾರ್ ಹಾಗೂ ಸಿಬ್ಬಂದಿ ಇಲ್ಲಿನ ಹೆಸ್ಕಾಂ ಗ್ರೀಡ್ ಬಳಿ ಹಿಮಾಚಲ ಪ್ರದೇಶದ ರಾಜುಸಿಂಗ್ ಮಾನಸಿಂಗ್ ಎಂಬುವವನ್ನು ಹಿಡಿದಿದ್ದು ,೯೭೫ ಗ್ರಾಂ ಚರಸ್ ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸ್ಐ ನಿರಂಜನ ನಾಯಕ, ಅರವಿಂದ ಶೆಟ್ಟಿ, ಹವಾಲ್ದಾರ ವಸಂತ ನಾಯ್ಕ, ರಾಜೇಶ ನಾಯ್ಕ, ತನೇಶ ಗಾವಡಿ, ಗೋರಕನಾಥ ರಾಣೆ, ಸಿಬ್ಬಂದಿ ಮಣಿಕಂಠ ಗೌಡ, ಗಣೇಶ ದಾಸರ್ ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ