ಹುಣಸೆಪಾಳ್ಯದಲ್ಲಿ ಚಿರತೆ ದಾಳಿಗೆ ಕರು ಬಲಿ

KannadaprabhaNewsNetwork | Published : Jun 23, 2025 11:51 PM

ಹನೂರು ತಾಲೂಕಿನ ಹುಣಿಸೆಪಾಳ್ಯ ಗ್ರಾಮದಲ್ಲಿ ಚಿರತೆ ಕರುವನ್ನು ಕೊಂದು ತಿಂದು ಬಿಟ್ಟುಹೋಗಿರುವುದು.

ಕನ್ನಡಪ್ರಭ ವಾರ್ತೆ ಹನೂರು

ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ಗಡಿ ಗ್ರಾಮ ತಾಲೂಕಿನ ಹುಣಸೆಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದೆ.

ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಬೈಲೂರು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವ ಹುಣಸೆಪಾಳ್ಯ ಗ್ರಾಮದ ಗೌಡ್ರು ಜಯಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಭಾನುವಾರ ರಾತ್ರಿ ಕಾನ್ಮೋಲ್ ದೊಡ್ಡಿ ಗ್ರಾಮದ ಜಡೆರುದ್ರ ಸೋಲಿಗ ವ್ಯಕ್ತಿಗೆ ಸೇರಿದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.ಭಯದ ವಾತಾವರಣ:

ಬಿಆರ್‌ಟಿ ವಲಯ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆ ಮಲೆಮಾದೇಶ್ವರ ವನ್ಯಜೀವಿ ವ್ಯಾಪ್ತಿಗೆ ಒಳಪಡುವ ರೈತರ ಜಮೀನಿನಲ್ಲಿದ್ದ ಮತ್ತು ಗ್ರಾಮದ ಬಳಿಯೇ ಚಿರತೆ ಓಡಾಡಿರುವುದರಿಂದ ಕರುವನ್ನು ರಾತ್ರಿ ಬಲಿಪಡಿದಿರುವುದರಿಂದ ಗಡಿ ಗ್ರಾಮದ ಹುಣಸೆಪಾಳ್ಯದಲ್ಲಿ ನಿವಾಸಿಗಳು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಉಂಟಾಗಿದೆ.ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ:

ಗಡಿಗ್ರಾಮ ಹುಣಸೆಪಾಳ್ಯ ಸೇರಿದಂತೆ ಸುತ್ತಲಿನ ರೈತರ ಜಮೀನುಗಳಲ್ಲಿ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ದಾಳಿ ನಡೆಸಿ ಫಸಲು ನಾಶಗೊಳಿಸುತ್ತಿದ್ದು ಜೊತೆಗೆ ಭಾನುವಾರ ರಾತ್ರಿ ಸಹ ಚಿರತೆ ಜಾನುವಾರು ಕರುವನ್ನು ತಿಂದಿರುವುದರಿಂದ ರೈತರು ಆತಂಕದ ನಡುವೆ ಜಮೀನುಗಳಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಸೋಲಿಗ ರೈತನಿಗೆ ಪರಿಹಾರಕ್ಕೆ ಆಗ್ರಹ:

ಚಿರತೆ ದಾಳಿಯಿಂದ ಕಾನ್ಮೋಲ್ ದೊಡ್ಡಿ ಸೋಲಿಗರ ಹಾಡಿಯ ಜಡೆ ರುದ್ರನಿಗೆ ಸೇರಿದ ಜಾನುವಾರು ಕರುವನ್ನು ಚಿರತೆ ಕೊಂದು ಹಾಕಿರುವುದನ್ನು ಅರಣ್ಯ ಅಧಿಕಾರಿಗಳು ಪರಿಶೀಲಿಸಿ, ರೈತನಿಗಾಗಿರುವ ನಷ್ಟ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಹುಣಸೆಪಾಳ್ಯ ಸುತ್ತಲಿನ ರೈತರ ಜಮೀನುಗಳಲ್ಲಿ ಕಳೆದ ಹಲವಾರು ದಿನಗಳಿಂದ ಕಾಡಾನೆಗಳು ಫಸಲು ನಾಶಗೊಳಿಸುತ್ತಿದ್ದು, ಆದರೆ ಭಾನುವಾರ ರಾತ್ರಿ ಚಿರತೆ ಜಾನುವಾರು ಕರುವನ್ನು ಕೊಂದು ತಿಂದಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಇಂತಹ ಘಟನೆಗಳು ಜರುಗದಂತೆ ಕ್ರಮವಹಿಸಲು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಮುಖಂಡ ಸದಾನಂದ ಹೇಳಿಕೆಯಲ್ಲಿ ತಿಳಿಸಿದ್ದಾರೆ.