ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Feb 02, 2024, 01:01 AM IST
1ಎಚ್ಎಸ್ಎನ್19 : ಅಪಘಾತದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾರು. | Kannada Prabha

ಸಾರಾಂಶ

ಟೈರ್ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಪಾಳ್ಯ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಮುಂಜಾನೆ ನಡೆದಿದೆ. ಹಾಸನ ಕೃಷ್ಣ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ ಪ್ರದೀಪ್ ಹಾಗೂ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಗುರು ಮೃತರು.

ಪಾಳ್ಯ ಸಮೀಪದ ಕಣದಹಳ್ಳಿ ಬಳಿ ಬಿಎಂ ರಸ್ತೆಯಲ್ಲಿ ಘಟನೆ । ಮಂಜು ಮುಸುಕಿದ್ದರಿಂದ ಕಾಣದಾದ ರಸ್ತೆ

ಕನ್ನಡಪ್ರಭ ವಾರ್ತೆ ಆಲೂರು

ಟೈರ್ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಪಾಳ್ಯ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಹಾಸನ ಕೃಷ್ಣ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ ಪ್ರದೀಪ್ (31) ಹಾಗೂ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಗುರು (19) ಮೃತರು. ಹೃತ್ವಿಕ್, ಹರ್ಷಿತ್ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನು ಘಟನೆ?

ಪ್ರದೀಪ್ ಹಾಗೂ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಗುರು, ಹೃತ್ವಿಕ್, ಹರ್ಷಿತ್ ಸೇರಿ ತಾಲೂಕಿನ ಹೊನ್ನವಳ್ಳಿ ಹತ್ತಿರ ಮತ್ತೊಂದು ಹೊಸ ಹೋಟೆಲ್ ಆರಂಭಿಸಲು ಮುಂದಾಗಿದ್ದರು. ಗುರುವಾರ ಅದರ ಪೂಜೆಗೆಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಹಾಸನದಿಂದ ಮಾರುತಿ ಕಾರಿನಲ್ಲಿ ಹೊರಟಿದ್ದರು. ಹರ್ಷಿತ್ ಕಾರು ಚಾಲನೆ ಮಾಡುತ್ತಿದ್ದರು. ಇದೇ ವೇಳೆಗೆ ದಟ್ಟವಾದ ಮಂಜು ಆವರಿಸಿತ್ತು. ಕಣದಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದಾಗ ಬೆಳಗಿನ ಜಾವ 4.50 ರ ಸುಮಾರಿಗೆ ರಸ್ತೆಯ ಎಡಬದಿಯಲ್ಲಿ ಟೈರ್ ಕೆಟ್ಟು ನಿಂತಿದ್ದ ಟಿಂಬರ್ ತುಂಬಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಕಾರಿನ ಮುಂದಿನ ಎಡಭಾಗದ ಹಾಗೂ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಾಲುಕೊಪ್ಪಲು ಗ್ರಾಮದ ಪ್ರದೀಪ್ ಹಾಗೂ ಚಾಮರಾಜನಗರ ಜಿಲ್ಲೆ ಕೊಟ್ಟಲವಾಡಿ ಗ್ರಾಮದ ಗುರು ಅವರ ತಲೆಗೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಾದನೂರು ಗ್ರಾಮದ ಹೃತಿಕ್ , ನಗರದ ಚನ್ನಪಟ್ಟಣದ ಕಾರು ಚಾಲಕ ಹರ್ಷಿತ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಪಘಾತದಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ