ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಅಕ್ಷತಾ ಅಂತ್ಯಸಂಸ್ಕಾರ

KannadaprabhaNewsNetwork |  
Published : Jun 05, 2025, 11:46 PM IST
5ಎಸ್ಡಿಪಿ2: ಅಕ್ಷತಾ  ಅಂಬಳ್ಳಿ5ಎಸ್ಡಿಪಿ3: ಸಿದ್ದಾಪುರಕ್ಕೆ ತರಲಾದ ಅಕ್ಷತಾ ಮೃತದೇಹ5ಎಸ್ಡಿಪಿ4: ಸಿದ್ದಾಪುರದಲ್ಲಿ ಅಕ್ಷತಾ ಅವರ ಅಂತ್ಯಸಂಸ್ಕಾರ ನೆರವೇರಿತು. | Kannada Prabha

ಸಾರಾಂಶ

ವೃತ್ತಿಯಿಂದ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಈಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರು.

ಸಿದ್ದಾಪುರ: ಜೂ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿಯ ಐಪಿಎಲ್‌ ವಿಜಯೋತ್ಸವದ ಸಂದರ್ಭ ಕಾಲ್ತುಳಿತಕ್ಕೆ ಬಲಿಯಾದ ಅಕ್ಷತಾ ಆಶಯ್ ಅಂಬಳ್ಳಿ (27) ಅವರ ಅಂತ್ಯಸಂಸ್ಕಾರ ಪಟ್ಟಣದ ಹೊಸೂರಿನ ಜಿಎಸ್‌ಬಿ ಸ್ಮಶಾನದಲ್ಲಿ ಗುರುವಾರ ನಡೆಯಿತು.

ವೃತ್ತಿಯಿಂದ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಈಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರು. ಕಳೆದ ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯಯರ್ ಆಗಿರುವ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಆಶಯ್‌ ಅಂಬಳ್ಳಿ ಅವರನ್ನು ವಿವಾಹವಾಗಿದ್ದರು. ಆರ್‌ಸಿಬಿ ತಂಡದ ಅಭಿಮಾನಿಯಾಗಿದ್ದ ಅಕ್ಷತಾ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿ ಮೃತಪಟ್ಟರು.

ಗುರುವಾರ ಬೆಳಿಗ್ಗೆ ಅಕ್ಷತಾ ಅಂಬಳ್ಳಿ ಅವರ ಪಾರ್ಥಿವ ಶರೀರವನ್ನು ಪಟ್ಟಣದ ರವೀಂದ್ರನಗರದ ಅವರ ಮೂಲ ಮನೆಗೆ ತರಲಾಯಿತು. ಅಂಬಳ್ಳಿ ಕುಟುಂಬದ ಹಾಗೂ ಮೃತರ ಸಂಬಂಧಿಕರು, ಆಪ್ತರು ಇದ್ದರು.

ಸರ್ಕಾರದ ಪರವಾಗಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಸೀಲದಾರ ಎಂ.ಆರ್. ಕುಲಕರ್ಣಿ ಅಧಿಕಾರಿಗಳು ಪಾಲ್ಗೊಂಡು ಅಕ್ಷತಾಗೆ ಅಂತಿಮ ಗೌರವ ಸಲ್ಲಿಸಿದರು. ಜನಪ್ರತಿನಿಧಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷತಾ ಅವರ ಪತಿ ಆಶಯ್‌ ಅಂಬಳ್ಳಿ, ಆರ್ಸಿಬಿ ತಂಡ ಐಪಿಎಲ್ ನಲ್ಲಿ ಗೆದ್ದ ಸಂಭ್ರಮಾಚರಣೆಯನ್ನು ಬುಧವಾರ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಆರ್ಸಿಬಿ ಇನ್ಸ್ಟಾಗ್ರಾಮ್ ಪೇಜ್ ನಿಂದ ತಿಳಿದು ಬಂತು. ನಾನು, ಪತ್ನಿ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು ಅರ್ಧ ದಿನದ ರಜೆ ಪಡೆದು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳಿದೆವು. ಅಲ್ಲಿ ತಲುಪಿದ ನಂತರ ನಮಗೆ ಪರೇಡ್ ನಡೆಯುತ್ತಿಲ್ಲ. ಕ್ರೀಡಾಂಗಣಕ್ಕೆ ತೆರಳಲು ಎಲ್ಲರಿಗೂ ಉಚಿತ ಅವಕಾಶವಿದೆ ಎಂದು ತಿಳಿದು ಬಂದಿತು.

ಅದರಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ 17 ತೆರೆದುಕೊಂಡಿತು. ನಾವು ಕ್ರೀಡಾಂಗಣದ ಒಳಗಡೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆವು. ಜನ ಒಮ್ಮೆಲೇ ಗೇಟಿನಿಂದ ಒಳ ನುಗ್ಗಲು ಪ್ರಯತ್ನಿಸಿದರು. ಅದರಿಂದ ಕಾಲ್ತುಳಿತ ಆರಂಭಗೊಂಡಿತು. ನಾನು ಪಕ್ಕದಲ್ಲಿದ್ದ ಬ್ಯಾರಿಕೇಡ್‌ನ ಸಹಾಯ ಪಡೆದು ನಿಂತಿದ್ದೆ. ಪತ್ನಿಯ ಕೈಯನ್ನು ಸಹ ಹಿಡಿದುಕೊಂಡಿದ್ದೆ. ಆದರೆ ನೂಕು ನುಗ್ಗಲಿನಿಂದ ನಾನು ಮತ್ತು ನನ್ನ ಪತ್ನಿ ಕೆಳಗೆ ಬಿದ್ದೆವು. ನಾನು ಸಹಾಯಕ್ಕಾಗಿ ಅಂಗಲಾಚಿದೆ. ನನ್ನನ್ನು ಯಾರೋ ಪಕ್ಕಕ್ಕೆ ಎಳೆದೊಯ್ದರು. ಆದರೆ ಪತ್ನಿಯ ಸುಳಿವೇ ಸಿಗಲಿಲ್ಲ. ಪತ್ನಿಯನ್ನು ಹುಡುಕಲು ಬಹಳ ಪ್ರಯತ್ನಿಸಿದೆ. ಜನರನ್ನು, ಪೊಲೀಸರನ್ನು ಸಹ ಸಂಪರ್ಕಿಸಿದೆ. ಉತ್ತರ ಸಿಗಲಿಲ್ಲ. ನಂತರ ಸುತ್ತಮುತ್ತಲಿನ ಆಸ್ಪತ್ರೆಗಳನ್ನು ಸಂಪರ್ಕಿಸಿದೆ. ಕೊನೆಯಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಪತ್ನಿಯ ಶವ ದೊರೆಯಿತು ಎಂದು ಘಟನೆಯನ್ನು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ