ಸಂಸ್ಕೃತಿ ವಿನಾಶಗೊಳಿಸುವ ಹುನ್ನಾರದ ನಡುವೆಯೂ ಎದ್ದು ನಿಂತ ನಾಗರೀಕತೆ

KannadaprabhaNewsNetwork |  
Published : Dec 10, 2023, 01:30 AM IST
ಫೋಟೋ ಡಿ.೦೯ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಬ್ರಿಟಿಷರಂತೆ ರಷ್ಯಾ ಸೇರಿ ವಿವಿಧ ರಾಷ್ಟ್ರಗಳು ಭಾರತದ ಸನಾತನ ಸಂಸ್ಕೃತಿ ಛಿದ್ರಗೊಳಿಸಿ, ದೇಶ ಒಡೆಯುವ ಷಡ್ಯಂತ್ರ ಮಾಡಿದ್ದರು. ರೈತ ಹೋರಾಟದ ಹೆಸರಿನಲ್ಲಿಯೂ ದೇಶ ವಿಭಜನೆಯ ಕಾರ್ಯ ಮಾಡಲಾಯಿತು. ಆದರೆ, ಭಾರತ ಒಡೆಯಲು ಸಾಧ್ಯವಿಲ್ಲ

ಯಲ್ಲಾಪುರ:

ಭವ್ಯ ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿನಾಶಗೊಳಿಸುವ ಹಲವರ ಹುನ್ನಾರದ ನಡುವೆಯೂ ದೇಶದ ನಾಗರೀಕತೆ ಎದ್ದು ನಿಂತಿದೆ. ವಿದೇಶೀಯರ ಪ್ರಳಯಾಂತಕ ಯೋಚನೆ-ಯೋಜನೆಗಳಿಂದಾಗಿ ಭಾರತದಲ್ಲಿ ಸಂಭವಿಸಿದ ಅನೇಕಾನೇಕ ವಿಧ್ವಂಸಕ ಮತ್ತು ನೀಚ ಕಾರ್ಯಗಳು ಇತಿಹಾಸದಿಂದ ವೇದ್ಯವಾಗಿದೆ ಎಂದು ಸುವರ್ಣ ಸುದ್ದಿವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.ಪಟ್ಟಣದ ಅಡಿಕೆ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ, ಯಲ್ಲಾಪುರ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ ಉತ್ತರ ಕನ್ನಡ ಆಶ್ರಯದಲ್ಲಿ ಹಮ್ಮಿಕೊಂಡಿರುವ ೨ ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ರಾಷ್ಟ್ರೀಯವಾದಿ ಎಂಬ ವಿಶ್ಲೇಷಣೆಗೊಳಗಾಗಿ ಗೌರವಿಸಲ್ಪಡುವುದು ಖಂಡಿತ ಕ್ಲೀಷೆಯಾಗಿದೆ. ಭಾರತ ಎಂದಿಗೂ ವಿಶ್ವಗುರುವಾಗಿಯೇ ಇದೆ, ಇರುತ್ತದೆ. ಆದರೆ, ಭಾರತದ ಚರಿಷ್ಮಾದ ಮೇಲೆ ಬಿದ್ದ ಧೂಳು ಒರೆಸಿ, ಸ್ವಚ್ಛಗೊಳಿಸುವ ಕಾರ್ಯ ನಮ್ಮೆಲ್ಲರದಾಗಬೇಕು ಎಂದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಇದು ಮುಂದಿನ ದಿನಗಳಲ್ಲಿಯೂ ಕ್ರಿಯಾಶೀಲವಾಗಿದ್ದು, ರಾಷ್ಟ್ರ ಸಂರಕ್ಷಣೆಗಾಗಿ ಸಾಹಿತ್ಯ ರಚನೆ ಎನ್ನುವಂತಾಗಬೇಕು ಎಂದು ಆಶಿಸಿದರು. ಬ್ರಿಟಿಷರಂತೆ ರಷ್ಯಾ ಸೇರಿ ವಿವಿಧ ರಾಷ್ಟ್ರಗಳು ಭಾರತದ ಸನಾತನ ಸಂಸ್ಕೃತಿ ಛಿದ್ರಗೊಳಿಸಿ, ದೇಶ ಒಡೆಯುವ ಷಡ್ಯಂತ್ರ ಮಾಡಿದ್ದರು. ರೈತ ಹೋರಾಟದ ಹೆಸರಿನಲ್ಲಿಯೂ ದೇಶ ವಿಭಜನೆಯ ಕಾರ್ಯ ಮಾಡಲಾಯಿತು. ಆದರೆ, ಭಾರತ ಒಡೆಯಲು ಸಾಧ್ಯವಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಜಿಲ್ಲೆಯಲ್ಲಿ ತಾಳೆಗರಿ ಗ್ರಂಥಗಳು, ತಿಗಳಾರಿ ಮತ್ತು ಸಂಸ್ಕೃತಗಳಲ್ಲಿ ಅನೇಕ ರಚನೆಗಳಿದ್ದರೂ ಅಧ್ಯಯನಕಾರರಿಲ್ಲದೇ ಇದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ರಾಷ್ಟ್ರದ ಸಾಹಿತ್ಯ ಮತ್ತು ಸಂಸ್ಕೃತಿ ಸಂರಕ್ಷಿಸುವ ನಿಟ್ಟಿನಲ್ಲಿ ಆಸಕ್ತರಿಗೆ ಅವಕಾಶ ಕಲ್ಪಿಸಲು ಹೊರಟಿರುವುದು ಸಂತಸದ ಸಂಗತಿ ಎಂದರು.ಕರ್ನಾಟಕ ಗಮಕ ಕಲಾ ಪರಿಷತ್‌ ಗೌರವಾಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ೨೦೨೩ರ ಸ್ವಾಂತತ್ರ್ಯ ದಿನಾಚರಣೆ ವೇಳೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ವರಾಜ್ಯ-ಸುರಾಜ್ಯ ಕವನ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಕವನ ಸಂಕಲನ ಲೋಕಾರ್ಪಣೆಗೊಳಿಸಿದ ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಅಧಿವೇಶನದ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು, ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ, ಶಿಕ್ಷಕ ಶ್ರೀಧರ ಹೆಗಡೆ, ತಾಲೂಕಾಧ್ಯಕ್ಷ ಗಣಪತಿ ಕಂಚೀಪಾಲ ಇದ್ದರು.ಸಭೆಯಲ್ಲಿ ನಟಿ ಲೀಲಾವತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ವನರಾಗ ಪ್ರಶಸ್ತಿ ಪ್ರದಾನ

ಅಧಿವೇಶನದ ಮೊದಲ ಅವಧಿಯಲ್ಲಿ ಸ್ವರ್ಣೀಮಾ ಭಾರತಿ ಸಾಹಿತ್ಯ ಸಮ್ಮಾನ್ ಮತ್ತು ಆಯ್ದ ಸಾಹಿತಿಗಳಿಗೆ ವನರಾಗ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಿದ್ದಾಪುರದ ಟಿ.ಎಂ. ರಮೇಶ (ದಶಕದ ಕಥೆಗಳು), ಬೆಳಗಾವಿಯ ಡಾ. ಶೋಭಾ ನಾಯಕ (ಶಯ್ಯಾಗೃಹದ ಸುದ್ದಿಗಳು), ಸಿದ್ದಾಪುರದ ಗಂಗಾಧರ ಕೊಳಗಿ (ಮಿಸ್ಡ್ ಕಾಲ್) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಮಾಸ್ಕೇರಿ ಎಂ.ಕೆ. ನಾಯ್ಕ, ಪ್ರಶಸ್ತಿ ಪ್ರಾಯೋಜಕ ವನರಾಗ ಶರ್ಮಾ, ನಾಗರಾಜ ಮದ್ಗುಣಿ, ಸಿ.ಎಸ್. ಚಂದ್ರಶೇಖರ, ಶ್ರೀರಾಮ ಲಾಲಗುಳಿ, ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಇದ್ದರು.ಗಮಕ ವಾಚನ

ಬೆಂಗಳೂರಿನ ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ವಾಚಿಸಿದ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಯಮನ ವಿವಾಹ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು. ಇವರ ಹೃದಯಸ್ಪರ್ಶಿ ವಾಚನಕ್ಕೆ ಪೂರಕವಾಗಿ, ಶಿವಮೊಗ್ಗದ ಎಂ.ಎಸ್. ವಿನಾಯಕ ಅತ್ಯಂತ ವಿದ್ವತ್ಪೂರ್ಣ ವ್ಯಾಖ್ಯಾನ ಮಾಡಿದರು. ವಿನಾಯಕ ಪೈ, ಕಾಷ್ಠ ಕಲಾವಿದ ಸಂತೋಷ ಗುಡಿಗಾರ, ಗಣಪತಿ ಬೋಳಗುಡ್ಡೆ, ಶ್ರೀಧರ ಅಣಲಗಾರ, ಸಮರ್ಥ ಜಮಗುಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ