ದಸರಾಕ್ಕೆ ರಂಗೇರಿದ ಮಾರುಕಟ್ಟೆ; ಹೂ ಬೆಲೆ ದುಬಾರಿ

KannadaprabhaNewsNetwork |  
Published : Oct 11, 2024, 11:48 PM IST
ಸಿಕೆಬಿ-1 ಬಜಾರ್ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ಬೂದುಗುಂಬಳ ಹಾಗೂ ಬಾಳೆ ಕಂದುಗಳು | Kannada Prabha

ಸಾರಾಂಶ

ಮಲ್ಲಿಗೆ, ದುಂಡು ಮಲ್ಲಿಗೆ ಹೂವು ತಮಿಳುನಾಡಿನಿಂದ ಬರುತ್ತಿದೆ. ಉಳಿದಂತೆ ಎಲ್ಲ ಹೂವುಗಳು ಸುತ್ತ ಮುತ್ತಲ ಗ್ರಾಮಗಳಿಂದ ಮಾರುಕಟ್ಟೆಗೆ ಬರುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಹೋಲಿಸಿದರೆ ವ್ಯಾಪಾರ ಭರ್ಜರಿಯಾಗಿದೆ. ಹಬ್ಬದಂದೇ ವಾಹನ ಡೆಲಿವರಿಗೆ ಖರೀದಿದಾರರ ಒತ್ತಾಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡಹಬ್ಬ ದಸರಾಗೆ ಖರೀದಿಯ ಭರಾಟೆ ಜೋರಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆ, ಎಂಜಿ ರಸ್ತೆಯ ಖಾಸಗಿ ಬಸ್ ನಿಲ್ದಾಣದಿಂದ ಅಬೇಡ್ಕರ್ ವೃತ್ತದವರೆಗೆ, ಬಿಬಿ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ, ಸಂತೆ ಮಾರುಕಟ್ಟೆ, ಬಜಾರ್ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆಗಳು ಕಳೆಗಟ್ಟಿವೆ.

ಹೂವು, ಬೂದುಗುಂಬಳ, ನಿಂಬೆಹಣ್ಣು ,ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ದಸರಾಗೆ ಪ್ರತಿ ವರ್ಷ ತಮಿಳುನಾಡು, ಆಂಧ್ರಪ್ರದೇಶದಿಂದ ಬರುವ ಬೂದಗುಂಬಳಕಾಯಿ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಗೊಂಡಿದೆ. ಪ್ರತಿ ಕೆಜಿಗೆ 15 ರಿಂದ 20 ರೂ.ವರೆಗೆ ಮಾರಾಟವಾಗುತ್ತಿದ್ದ ಬೂದಗುಂಬಳ, ಈಗ 25 ರಿಂದ 30 ರೂ.ಗೆ ಏರಿದೆ. ಹೂವಿನ ಬೆಲೆಯೂ ಭಾರಿ ಏರಿಕೆ ಕಂಡಿದೆ.

ಬಾಳೆ ಕಂದು ದರ ₹100

ನಿಂಬೆಹಣ್ಣಿನ ದರದಲ್ಲೂ ಭಾರೀ ಏರಿಕೆಯಾಗಿದ್ದು, ಸಣ್ಣ ಗಾತ್ರದ್ದು 3 ರೂ., ದಪ್ಪ ಗಾತ್ರದ್ದು 5 ರೂ. ಇದೆ. ಬಾಳೆ ಕಂದು ಕೂಡ 100 ರೂ. ಗಡಿ ದಾಟಿದೆ. ದಸರಾಗೆ ಬೂದಗುಂಬಳ, ನಿಂಬೆಹಣ್ಣು ಸಹಜವಾಗಿ ಹೆಚ್ಚಾಗಿ ಖರೀದಿಸಲಾಗುವುದು. ಹೀಗಾಗಿ, ಮಾರುಕಟ್ಟೆಗಳಲ್ಲಿ ಡಿಮ್ಯಾಂಡ್‌ ಹೆಚ್ಚಾಗಿಯೇ ಇದೆ. ಇನ್ನು, ಕಡ್ಲೆಪುರಿ ಒಂದು ಸೇರಿಗೆ 8 ರಿಂದ 12 ರು.ಗಳವರೆಗೆ ಮಾರಾಟವಾಗುತ್ತಿದೆ. ಗುರುವಾರದಿಂದಲೇ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಪ್ರಾರಂಭವಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ, ಬೂದಗುಂಬಳಕಾಯಿ, ಬಾಳೆ ಕಂದುಗಳು ರಾಶಿಗಟ್ಟಲೇ ಬಂದಿದ್ದು, ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.

ಕನಕಾಂಬರ ಕೆಜಿಗೆ ₹1200

ಹೂ ಮತ್ತು ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದು, ಕನಕಾಂಬರ ಕೆ.ಜಿ.ಗೆ 1,200 ರೂ., ಮಲ್ಲಿಗೆ 800 ರೂ., ಸೇವಂತಿಗೆ 250-300 ರೂ., ಮಳ್ಳೆ ಹೂವು 800 ರೂ., ಕಾಕಡ 400 ರೂ., ಗುಲಾಬಿ 400 ರೂ., ಸುಗಂಧ ರಾಜ 300 ರೂ. ಇದ್ದು, ಆಪಲ್ ಬಿಟ್ಟರೆ ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡಿದೆ.ಮೊಸಂಬಿ 80-100 ರೂ. ಸೇಬು 100-120 ರೂ.ದ್ರಾಕ್ಷಿ 120-200 ರೂ.ದಾಳಿಂಬೆ 100-200 ರೂ. ಏಲಕ್ಕಿ ಬಾಳೆ 80-100 ರೂ.ಪಚ್ಚಬಾಳೆ 40-60 ರೂ.ಪೈನಾಪಲ್‌ 80-100 ರೂ.ಸೀಬೆ-70-100ರೂ.ಡ್ರಾಗನ್ ಪ್ರೂಟ್- 200-250 ರೂ.ಸಪೋಟಾ-60-90ರೂ.ಗಳಿಗೆ ಮಾರಾಟವಾಗುತ್ತಿತ್ತು.

ಕಡ್ಲೆಪುರಿಗೆ ಹೆಚ್ಚು ಬೇಡಿಕೆಯಿದ್ದು, ಒಂದು ಸೇರಿಗೆ 8-12 ರು.ಗಳವರೆಗೆ ಮಾರಾಟವಾಗುತ್ತಿದೆ. ಶುಕ್ರವಾರ-ಶನಿವಾರ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬವಿದ್ದರೂ, ಮೂರುದಿನಗಳು ಸಾಲು ರಜೆ ಇರುವುದರಿಂದ ಬಹುತೇಕ ಕಚೇರಿಗಳಲ್ಲಿ ಗುರುವಾರವೇ ಪೂಜೆ ಮಾಡಿದ್ದಾರೆ. ಬಟ್ಟೆ, ಆಭರಣ, ವಾಹನ ಮಾರಾಟ

ಹೂವು, ಹಣ್ಣು ಮಾತ್ರವಲ್ಲ, ಬಟ್ಟೆ, ಆಭರಣ, ವಾಹನ ಮಾರಾಟ ಭರ್ಜರಿಯಾಗಿ ನಡೆದಿದೆ. ಬಹುತೇಕ ಪ್ರಮುಖ ಆಭರಣ ಮಳಿಗೆಗಳು ಮತ್ತು ಆಟೊಮೊಬೈಲ್‌ ಕಂಪನಿಗಳು ಭರ್ಜರಿ ಆಫರ್‌ಗಳನ್ನು ನೀಡಿವೆ. ದ್ವಿಚಕ್ರ, ಕಾರುಗಳ ಮಾರಾಟ ಜೋರಾಗಿದೆ. ಹೆಚ್ಚಿನ ಗ್ರಾಹಕರು ಆಯುಧ ಪೂಜೆ ಮತ್ತು ದಸರಾ ದಿನವೇ ಕಾರು ಡೆಲಿವರಿ ಕೇಳುತ್ತಿದ್ದಾರೆ. ನಮ್ಮ ಷೋರೂಮ್‌ನಿಂದಲೇ ಈ ಎರಡು ದಿನಗಳಲ್ಲಿ ನೂರಕ್ಕೂ ಅಧಿಕ ಬೈಕ್ ಗಳನ್ನು ಡೆಲಿವರಿ ಮಾಡಬೇಕಿದೆ, ಎಂದು ಬೈಕ್ ಷೋರೂಮ್‌ವೊಂದರ ಸಿಬ್ಬಂದಿ ತಿಳಿಸಿದರು.

ಮಲ್ಲಿಗೆ, ದುಂಡು ಮಲ್ಲಿಗೆ ಹೂವು ತಮಿಳುನಾಡಿನಿಂದ ಬರುತ್ತಿದೆ. ಉಳಿದಂತೆ ಎಲ್ಲ ಹೂವುಗಳು ಸುತ್ತ ಮುತ್ತಲ ಗ್ರಾಮಗಳಿಂದ ಮಾರುಕಟ್ಟೆಗೆ ಬರುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಹೋಲಿಸಿದರೆ ವ್ಯಾಪಾರ ಭರ್ಜರಿಯಾಗಿದ ಎನ್ನುತ್ತಾರೆ ಎಪಿಎಂಸಿಯ ಶ್ರೀಕೃಷ್ಣಾ ಪ್ಲವರ್ ಸ್ಟಾಲ್ ಸಗಟು ವರ್ತಕ ಎಸ್.ಕ್ಯಾತಪ್ಪ. ಗಣೇಶ ಹಬ್ಬಕ್ಕೆ ಹೋಲಿಸಿದರೆ ಹೂಗಳ ಬೆಲೆ ದುಬಾರಿಯಾಗಿದೆ. ನಿಂಬೆಹಣ್ಣು, ಬೂದುಗುಂಬಳಕಾಯಿ, ಬಾಳೆ ಕಂದು, ಆಪಲ್ ಬಿಟ್ಟರೆ ಹಣ್ಣುಗಳ ಬೆಲೆ ಏರಿಕೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌