ಕನ್ನಡಪ್ರಭ ವಾರ್ತೆ ಮಡಿಕೇರಿ
ಒಂದು ಗ್ರಾಮದಲ್ಲಿ ಒಂದು ಸಹಕಾರ ಸಂಘ ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಆಶಯವಾಗಿದ್ದು ಆ ಮೂಲಕ ಸ್ಥಳೀಯ ರೈತರಿಗೆ ಗೊಬ್ಬರ, ಉತ್ಪನ್ನಗಳಿಗೆ ಗೋದಾಮು, ಶಿಕ್ಷಣ ನೀಡುವಂತಹ ಕಾರ್ಯಗಳನ್ನು ಕೈಗೊಂಡು ರೈತರ ಆರ್ಥಿಕತೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪಹೇಳಿದ್ದಾರೆ.70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರಿಕೆ ಪ್ಯಾಕ್ಸ್ ಸಭಾಂಗಣದಲ್ಲಿ ನಡೆದ ‘ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳ’ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇಶದ ಆರ್ಥಿಕತೆಯನ್ನು ವೃದ್ಧಿಗೊಳಿಸಬಹುದೆಂಬ ಚಿಂತನೆಯೊಂದಿಗೆ 5 ಟ್ರಿಲಿಯನ್ ಡಾಲರ್ಗೆ ದೇಶದ ಆರ್ಥಿಕತೆ ಕೊಂಡೊಯ್ಯಬೇಕೆನ್ನುವ ಉದ್ದೇಶದೊಂದಿಗೆ ಸಹಕಾರ ಕ್ಷೇತ್ರದ ಮೂಲಕ ಈ ಸಾಧನೆ ಕೈಗೊಳ್ಳಬಹುದೆಂದು ಚಿಂತಿಸಿ ಗ್ರಾಮಕ್ಕೊಂದು ಸಹಕಾರ ಸಂಘ ಯೋಜನೆ ರೂಪಿಸಲಾಗಿದೆ. ಈ ದಿಸೆಯಲ್ಲಿಯೇ 12 ಅಂಶಗಳ ಯೋಜನೆಯನ್ನು ಜಾರಿಗೊಳಿಸಿದ್ದು ಸಹಕಾರ ಸಂಘಗಳು, ಜನೌಷಧಿ ಕೇಂದ್ರ ಸ್ಥಾಪನೆ, ಪೆಟ್ರೋಲ್ ಬಂಕ್ / ಚಾರ್ಚಿಂಗ್ ಘಟಕ, ಕುಡಿಯುವ ನೀರಿನ ಘಟಕ, ಗೋದಾಮು ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ 119 ವರ್ಷಗಳ ಇತಿಹಾಸವಿದ್ದು ಅನೇಕ ಹಿರಿಯ ಸಹಕಾರಿಗಳ ತ್ಯಾಗ, ನಿಸ್ವಾರ್ಥ ಸೇವೆ, ಉತ್ತಮ ಆಡಳಿತದ ಫಲವಾಗಿ ಇದೆಲ್ಲಾ ಸಾಧಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ಉತ್ತಮವಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಸಂಘಗಳ ಕಾರ್ಯವ್ಯಾಪ್ತಿ ಹಬ್ಬಿದೆ. ಕ್ಯಾಂಪ್ಕೋ, ಮ್ಯಾಂಮ್ಕೋ, ನಂದಿನಿ, ಅಮೂಲ್ ಇತ್ಯಾದಿ ಬ್ರಾಂಡ್ಗಳೇ ಇದಕ್ಕೆ ಸಾಕ್ಷಿಯಾಗಿದ್ದು ಸಂಘಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದರು.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ಜೆ. ಸತೀಶ್ ಕುಮಾರ್ ಮಾತನಾಡಿ, ಇಂಗ್ಲೆಂಡ್ನಲ್ಲಿ ಪ್ರಪ್ರಥಮ ಸಹಕಾರ ಸಂಘ ಪ್ರಾರಂಭವಾದ ನಂತರದಲ್ಲಿ ಭಾರತದಲ್ಲಿ 1905 ರಲ್ಲಿ ಗದಗ್ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು. ನಂತರದಲ್ಲಿ ಕೊಡಗು ಜಿಲ್ಲೆಯಲ್ಲಿ ಕೇವಲ 12 ದಿನಗಳ ಅಂತರದಲ್ಲೇ ಕೊಡಗಿನ ತಾಲ್ತಾರೆ ಶೆಟ್ಟಳ್ಳಿಯಲ್ಲಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಯಿತು. ನಂತರದಲ್ಲಿ ಭಾಗಮಂಡಲ ಪ್ಯಾಕ್ಸ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ, ಜೇನು ಬೆಳೆಗಾರರ ಸಹಕಾರ ಸಂಘ, ಹೀಗೆ ಹಲವು ಸಂಘಗಳು ಇಂದು ಶತಮಾನೋತ್ಸವವನ್ನು ಕಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.ಇಂದು ಪ್ಯಾಕ್ಸ್, ಪತ್ತಿನ ಸಹಕಾರ ಸಂಘಗಳು ವಾಣಿಜ್ಯ ಬ್ಯಾಂಕ್ಗಳಿಗೆ ಪೈಪೋಟಿ ನೀಡುತ್ತಿದ್ದು ಸಂಘಗಳ ತ್ವರಿತ ಕಾರ್ಯನಿರ್ವಹಣೆ ಶ್ಲಾಘನಾರ್ಹ. ರಾಜ್ಯದಲ್ಲಿಯೇ ಹಲವು ವಿಧದ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರ ಆಸ್ಪತ್ರೆ, ಸಹಕಾರ ಸಾರಿಗೆ, ಸಹಕಾರ ಸೂಪರ್ ಮಾರ್ಕೆಟ್ ಇತ್ಯಾದಿ ಎಲ್ಲಾ ರಂಗಗಳಲ್ಲೂ ಸಹಕಾರ ಕ್ಷೇತ್ರ ವ್ಯಾಪಿಸಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಬೇಕಲ್ ಸಿ. ಜಯರಾಮ, ಕೋಡಿ ಕೆ. ಪೊನ್ನಪ್ಪ, ಕೋಡಿ ಕೆ. ಸೀತಾರಾಮ, ಎಸ್. ವೆಂಕಪ್ಪಗೌಡ, ಬಿ.ಪಿ. ನಿರ್ಮಲಾನಂದ, ಎಚ್.ಎ. ಹರೀಶ, ಕೆ.ಬಿ. ರಾಘವ, ಬಿ.ಎ. ನಾರಾಯಣ, ಪಿ.ಟಿ. ಐಸಾಕ್, ಪಿ.ಎಂ. ನಂಜುಂಡ, ಬೇಕಲ್ ಡಿ. ದೇವರಾಜ, ಕೆ.ಪಿ. ರಘುರಾಮ, ಬೇಕಲ್ ಜೆ. ಶರಣ್ ಕುಮಾರ್ ಹಾಗೂ ಮುಂದೆ ನಿವೃತ್ತರಾಗಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.ಕರಿಕೆ ಪ್ಯಾಕ್ಸ್ ಅಧ್ಯಕ್ಷ ಬೇಕಲ್ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ. ರವಿ ಬಸಪ್ಪ, ಕೆ.ಎಸ್. ಗಣಪತಿ, ಕೆ.ಎಂ. ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್, ಕರಿಕೆ ಪ್ಯಾಕ್ಸ್ನ ಉಪಾಧ್ಯಕ್ಷ ಎಂ.ಎ. ರೆಲ್ಸನ್ ಹಾಜರಿದ್ದರು. ದಿನದ ಮಹತ್ವದ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲ ಎಂ.ಎ. ಶ್ಯಾಮಲಾ ಉಪನ್ಯಾಸ ನೀಡಿದರು.ಸಂಘದ ನಿರ್ದೇಶಕರಾದ ಧನ್ಯಶ್ರೀ ಕುಮಾರ್ ಹಾಗೂ ಕೆ.ಪಿ. ಸರಸ್ವತಿ ಪ್ರಾರ್ಥಿಸಿದರು. ಯೂನಿಯನ್ನ ವ್ಯವಸ್ಥಾಪಕಿ ಆರ್. ಮಂಜುಳಾ ನಿರೂಪಿಸಿದರು.