ಒಂದು ದೇಶ, ಒಂದು ಸಮಾನ ವೇತನ ನೀತಿ ಜಾರಿಗೆ ತರಲು ಒತ್ತಾಯ

KannadaprabhaNewsNetwork | Published : Nov 11, 2024 12:46 AM

ಸಾರಾಂಶ

ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ ಕೋಮು- ಸಾಮರಸ್ಯ ಕದಡುವ ದಾಳಿ, ಜಗಳಗಳನ್ನು ಹಚ್ಚುವ ಮೂಲಕ ಸಮಾಜದಲ್ಲಿ ದ್ವೇಷ, ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಒತ್ತಾಯಿಸಿದರು.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಇಡೀ ದೇಶವ್ಯಾಪಿ ಪರಿಶ್ರಮ ವಹಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನದಲ್ಲಿರುವ ಅಸಮಾನತೆ ಹೋಗಲಾಡಿಸಿ ಘನತೆಯ ಬದುಕು ಸಾಗಿಸಲು ಕೇಂದ್ರ ಸರ್ಕಾರ ಒಂದೇ ರೀತಿಯ ಸಮಾನ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಒತ್ತಾಯಿಸಿದರು.

ನಗರದ ಅಕ್ಕನ ಬಳಗದಲ್ಲಿ ಭಾನುವಾರ ಸಿಪಿಐ(ಎಂ)ನ 13ನೇ ಧಾರವಾಡ- ಹಾವೇರಿ ಜಿಲ್ಲಾ ಸಮ್ಮೇಳನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ ಕೋಮು- ಸಾಮರಸ್ಯ ಕದಡುವ ದಾಳಿ, ಜಗಳಗಳನ್ನು ಹಚ್ಚುವ ಮೂಲಕ ಸಮಾಜದಲ್ಲಿ ದ್ವೇಷ, ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಯಂತಹ ಮನುಷ್ಯಕುಲ ತಲೆತಗ್ಗಿಸುವ ಹೀನ ಘಟನೆ ನಡೆದರೂ ಆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರುವುದು ಮಹಿಳೆಯರ ವಿಚಾರದಲ್ಲಿ ಬಿಜೆಪಿ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಸಿಪಿಐ ಪಕ್ಷದ ಜಿಲ್ಲಾ ಮುಖಂಡ ಎ.ಎಸ್. ಫೀರಜಾದೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. ಕಮ್ಯುನಿಸ್ಟ್‌ ಪಕ್ಷದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ, ಸಿಪಿಐ, ಸಿಪಿಐ(ಎಂ) ಪಕ್ಷಗಳು ಒಂದಾಗುವುದು ಅವಶ್ಯಕವಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ. ನಾಗರಾಜ್ ಅವರು ತಮಟೆ ಬಾರಿಸುವ ಮೂಲಕ ಸಮ್ಮೇಳನ ಉದ್ಘಾಟಿಸಿದರು. ಕಾರ್ಯಕ್ರಮದ ಮೊದಲು ಪಕ್ಷದ ಹಿರಿಯ ನಾಯಕರಾದ ರುದ್ರಪ್ಪ ಜಾಬೀನ ಧ್ವಜಾರೋಹಣ ನೆರವೇರಿಸಿದರು. ನಂತರ ಹುತಾತ್ಮ ಸ್ತಂಭಕ್ಕೆ ಮುಖಂಡರು ಹಾಗೂ ಪ್ರತಿನಿಧಿಗಳು ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಿ.ಎನ್. ಪೂಜಾರಿ ಬಿ.ಎಸ್. ಸೊಪ್ಪಿನ, ಬಿ.ಐ. ಈಳಿಗೇರ, ಬಸವರಾಜ ಪೂಜಾರ, ಆನಂದ ಅರ್ಚಕ, ಗುರುಸಿದ್ದಪ್ಪ ಅಂಬಿಗೇರ ಸೇರಿದಂತೆ ಹಲವರಿದ್ದರು.

Share this article