ಗಜೇಂದ್ರಗಡ: ತಂದೆ, ತಾಯಿ ಜನ್ಮ ನೀಡಿದ ದೇವರಾದರೆ, ಮನುಷ್ಯನ ಅಳಿವು ಉಳಿವಿನ ಸಂದರ್ಭದಲ್ಲಿ ಚಿಕಿತ್ಸೆ ಮೂಲಕ ಮರುಜನ್ಮ ನೀಡುವ ವೈದ್ಯರು ಕಣ್ಣಿಗೆ ಕಾಣುವ ದೇವರು ಎಂದು ಪುರಸಭೆ ಸದಸ್ಯ, ಆರೋಗ್ಯ ಸಲಹಾ ಸಮಿತಿ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.
ಆರೋಗ್ಯ ಸಲಹಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ ಮಾತನಾಡಿ, ಒಬ್ಬ ವೈದ್ಯನು ಆತ್ಮವಿಶ್ವಾಸದಿಂದ ಇದ್ದಾಗ ಮಾತ್ರ ಅವನು ತನ್ನ ರೋಗಿಗಳಿಗೆ ಭರವಸೆ ನೀಡಬಹುದು. ಚಿಕಿತ್ಸೆಗೆ ಬರುವ ರೋಗಿಗಳಿಗೆ ವೈದ್ಯರು ನೀಡುವ ಔಷಧಿಗಿಂತ ಪರಿಣಾಮಕಾರಿಯಾದದ್ದು ವೈದ್ಯರು ರೋಗವು ಸಣ್ಣದಿರಲಿ ಅಥವಾ ದೊಡ್ಡದಿರಲಿ ರೋಗವು ಗುಣಮುಖವಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡಿದರೆ ರೋಗಿ ಅರ್ಧದಷ್ಟು ಗುಣಮುಖವಾಗುತ್ತಾನೆ.ಇತ್ತ ರೋಗಿಗಳು ಸಹ ವೈದ್ಯರು ನಮ್ಮಂತೆ ಅವರು ಮನುಷ್ಯರು ನಮ್ಮನ್ನು ಬದುಕಿಸಲು ಪ್ರಯತ್ನಿಸುವ ಮಾನವತಾವಾಧಿಗಳನ್ನು ಎನ್ನುವದನ್ನು ಗಮನದಲ್ಲಿಟ್ಟಿಕೊಳ್ಳಬೇಕು. ರೋಗಿಗಳು ಹಾಗೂ ಅವರ ಕುಟುಂಬಸ್ಥರು ಅಂದುಕೊಂಡಂತೆ ಎಲ್ಲವು ನಡೆಯಬೇಕು ಎಂಬುದು ಸಮಂಜಸವಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೂ ಸಹ ಕಷ್ಟ ಸುಖ ಎನ್ನುವದಿರುತ್ತವೆ.ಆದರೆ ಅಂತಿಮವಾಗಿ ವೈದ್ಯರು ರೋಗಿಯನ್ನು ಗುಣಮುಖವನ್ನಾಗಿಸಲು ಹಾಗೂ ಅವರ ಜೀವ ರಕ್ಷಣೆಗಾಗಿ ಶ್ರಮಿಸುತ್ತಾರೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.
ಈ ವೇಳೆ ಆರೋಗ್ಯ ಸಲಹಾ ಸಮಿತಿ ಸದಸ್ಯ ಅರಿಹಂತ ಬಾಗಮಾರ ಸೇರಿ ಇತರರು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿದರು.ಡಾ. ಅನಿಲಕುಮಾರ ತೋಟದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯರಾದ ವೀಣಾ ಹಾದಿಮನಿ, ಗಗನಾ, ಕಾಶೀನಾಥ ಪೂಜಾರ, ಸಂಗಮೇಶ, ರಾಘವೇಂದ್ರ ಕೊಪ್ಪಳ, ಶರಣು ವದೆಗೋಳ ಇದ್ದರು.