ಕನಕಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮಾಜದ ಎಲ್ಲಾ ಜನರಿಗೂ ಸಮಾನವಾದ ಅವಕಾಶ ಸಿಗುವಂತೆ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಅವರನ್ನು ಒಂದು ಸಮುದಾಯ, ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಗೌರವ ಭಾವನೆಯಿಂದ ಗೌರವಿಸ ಬೇಕೆಂದು ಇಒ ಅವಿನಾಶ್ ತಿಳಿಸಿದರು.
ನಗರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ದೇಶ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಾಗ ಸ್ವತಂತ್ರವಾಗಲಿಲ್ಲ. ಜಾತಿ ಪದ್ಧತಿ, ಅಸ್ಪೃಶ್ಯ ಆಚರಣೆ, ಸಮಾಜದ ಕಟ್ಟುಪಾಡುಗಳು, ಅನಿಷ್ಠ ಆಚರಣೆಗಳ ಸಂಕೋಲೆಯಲ್ಲಿ ಬೇಯುತ್ತಿತ್ತು, ಬಾಬಾ ಅಂಬೇಡ್ಕರ್ ಸಂವಿಧಾನದ ಮೂಲಕ ಅವುಗಳಿಂದ ನಿಜವಾದ ಸ್ವಾತಂತ್ರ ಕೊಡಿಸಿದ್ದಾರೆ. ಕತ್ತಲೆಯಲ್ಲಿದ್ದ ಜನರ ಬಾಳಿಗೆ ಸಂವಿಧಾನ ಬೆಳಕಾಗಿದೆ ಎಂದರು.
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ಮಾತನಾಡಿ, ಸಂವಿಧಾನ ಜಾರಿಗೊಂಡು 75 ವರ್ಷವಾದರೂ ಶೋಷಣೆ, ಅಸಮಾನತೆ, ಜಾತಿ ವ್ಯವಸ್ಥೆ, ಅನ್ಯಾಯ, ಅಧರ್ಮ ದೂರವಾಗಿಲ್ಲ. ಬಡವರ ಪಾಲಿಗೆ ಸಂವಿಧಾನ ಕಾನೂನಿನಲ್ಲೇ ಉಳಿದಿದೆ. ಶೋಷಿತರು ಮತ್ತು ಬಡವರು ಇನ್ನೂ ಕಷ್ಟದಲ್ಲೇ ಇದ್ದಾರೆ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂಜಯ್, ಅರಣ್ಯ ಇಲಾಖೆಯ ಆರ್ಎಫ್ಒ ರವಿ, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಕರವೇ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03:ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಬಾ ಸಾಹೇಬ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಇಒ ಅವಿನಾಶ್, ತಹಸೀಲ್ದಾರ್ ಸಂಜಯ್ ಇತರರು ಪಾಲ್ಗೊಂಡಿದ್ದರು.