ಕನ್ನಡಪ್ರಭ ವಾರ್ತೆ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದಲ್ಲಿ ನಿವಾಸಿ ಮಂಜಪ್ಪ ನಾಗಪ್ಪ ಭರಡಿ (37) ಎಂಬುವರು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ. ಕೃಷಿ ಚಟುವಟಿಕೆಗಳೆಂದು ಗ್ರಾಮದ ಸೊಸೈಟಿಯಲ್ಲಿ ₹60 ಸಾವಿರ ಬೆಳೆಸಾಲ ಸೇರಿದಂತೆ ವರ್ತಕರ ಅಂಗಡಿಗಳಲ್ಲಿ ₹6 ಲಕ್ಷ ಹಾಗೂ ಕೈಗಡ ರೂಪದಲ್ಲಿ ₹50 ಸಾವಿರ ಸಾಲ ಪಡೆದಿದ್ದ ಎನ್ನಲಾಗಿದೆ. ಆದರೆ ಪ್ರಸಕ್ತ ವರ್ಷ ಬರಗಾಲದ ಹಿನ್ನೆಲೆ ಹೊಲದಲ್ಲಿನ ಗೋವಿನಜೋಳದ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ಮಾಡಿದ ಸಾಲ ತೀರಿಸುವುದು ಹೇಗೆಂದು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.