ಕನ್ನಡ್ರಭ ವಾರ್ತೆ ಬೀದರ್
ಮಂಗಳವಾರ ತಡರಾತ್ರಿಯಿಂದಲೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಚರ್ಚಗಳಲ್ಲಿ ಯೇಸುವಿನ ಜನ್ಮದಿನಾಚರಣೆ ಬೆಳಕಿನ ಹಬ್ಬಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು.
ಬೀದರ್ ನಗರದ ಐತಿಹಾಸಿಕ ಮೆಥೋಡಿಸ್ಟ್ ಚರ್ಚನಲ್ಲಿ ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆಗಾಗಿ ಸೇರಿ ಜಿಲ್ಲಾ ಮೇಲ್ವಿಚಾರಕ ರೇ.ನೆಲ್ಸನ್ ಸುಮಿತ್ರಾ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ನಗರದ ವಿವಿಧ ಬಡಾವಣೆಗಳಾದ ಚಿದ್ರಿ, ನಾವದಗೇರಿ, ಶಾಹಗಂಜ, ವಿದ್ಯಾನಗರ ಕಾಲೋನಿ, ಚಿಯೋನ ಕಾಲೋನಿ, ವಿಜಯನಗರ ಕಾಲೋನಿ ಸೇರಿದಂತೆ ಮೇಥೋಡಿಸ್ಟ್ ಚರ್ಚ ಹಾಗೂ ಹೈದ್ರಾಬಾದ್ ರಸ್ತೆಯಲ್ಲಿರುವ ರೋಮನ್ ಕ್ಯಾಥೋಲಿಕ ಚರ್ಚನಲ್ಲಿಯು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ಕೋರಿದರು. ಇದೇ ಸಂದರ್ಭದಲ್ಲಿ ಏಸುವಿನ ಕುರಿತು ಗೀತೆಗಳ ಸಂಭ್ರಮ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರಿಸ್ಮಸ್ ಹಬ್ಬದ ನಿಮಿತ್ತ ವಿವಿಧ ಪಕ್ಷಗಳ ಗಣ್ಯರು ಚರ್ಚಗಳಿಗೆ ಭೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭ ಕೋರಿದರು.