ಶಿರಸಿ: ಕೇಂದ್ರ ಮಾಜಿ ಸಚಿವ ಹಾಗೂ ಉತ್ತರಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಮನೆಯ ಜಿಮ್ ಕೊಠಡಿಯಲ್ಲಿದ್ದ ಸಲಕರಣೆಗಳಿಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ.
ಭಟ್ಕಳ: ದಾಂಡೇಲಿ ಮೂಲದ ಪುಟ್ಟ ಮಗು ಅಪಹರಣದ ಬಗ್ಗೆ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಪುಟ್ಟ ಮಗುವೊಂದನ್ನು ಅಪಹರಣ ಮಾಡಿದ್ದು, ಮಗುವನ್ನು ಹುಡುಕಿಕೊಡುವಂತೆ ಠಾಣೆಯಲ್ಲಿ ದಾಂಡೇಲಿನ ಹುಸೇನ ಸಾಬ ತಂದೆ ಅಕ್ಬರ್ ಲತೀಫನವರ ದೂರು ನೀಡಿದ್ದು, ಅದರಲ್ಲಿ ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ದಾಂಡೇಲಿಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡು ಹೋಗಿದ್ದರು. ನಂತರ ಅವರು ನನಗೆ ಕರೆ ಮಾಡಿ ಭಟ್ಕಳಕ್ಕೆ ಒಮ್ಮೆ ಬಂದು ಹೋಗುವಂತೆ ಒತ್ತಾಯ ಮಾಡಿದ ಮೇರೆಗೆ ನಾವು ಜೂ. ೧೮ರಂದು ನನ್ನ ಹೆಂಡತಿ ಬಳಿ ಇದ್ದ ೭ ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ ಎಂದು ಹೋದವರು ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ನಮ್ಮ ಮೊಬೈಲ್ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೋರಿಸಿ ಮಗು ಆರಾಮವಾಗಿ ಇರುವುದಾಗಿ ಹೇಳಿದ್ದು, ಆದರೆ ಮಗುವನ್ನು ತಮಗೆ ಮರಳಿ ಕೊಟ್ಟಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿನ ಪತ್ತೆ ಕಾರ್ಯ ಆರಂಭಿಸಿದ್ದಾರೆ.