ರಾಣಿಬೆನ್ನೂರು: ಇಲ್ಲಿನ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ರಾಣಿಬೆನ್ನೂರು ಕಾ ರಾಜಾ ಗಣಪತಿಯ (ನವದುರ್ಗೆಯರ ಮಾದರಿ) ಶೋಭಾಯಾತ್ರೆ ಭಾನುವಾರ ನಗರದಲ್ಲಿ ವೈಭವಪೂರಿತವಾಗಿ ಜರುಗಿತು. ಸ್ಥಳೀಯ ನಗರಸಭಾ ಕ್ರೀಡಾಂಗಣದ ಬಳಿ ಮಧ್ಯಾಹ್ನ 1ಕ್ಕೆ ಶೋಭಾಯಾತ್ರೆ ಪ್ರಾರಂಭವಾಯಿತು. ನಂತರ ಹಳೇ ಪಿ.ಬಿ.ರಸ್ತೆ, ಸಾಲೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ.ರಸ್ತೆ, ಚತುರ್ಮುಖಿ ದೇವಸ್ಥಾನ, ದೊಡ್ಡಪೇಟೆ ರಸ್ತೆ, ಸುಭಾಸ ಚೌಕ್, ಬಸವೇಶ್ವರ ದೇವಸ್ಥಾನ, ರೊಡ್ಡನವರ ಓಣಿ, ಕುಂಬಾರ ಓಣಿ, ಓಂ ಸರ್ಕಲ್, ರಂಗನಾಥ ನಗರ, ಸಂಗಮ್ ಸರ್ಕಲ್, ಪೋಸ್ಟ್ ಸರ್ಕಲ್, ಮೆಡ್ಲೇರಿ ಕ್ರಾಸ್, ಬಸ್ ನಿಲ್ದಾಣ ಮಾರ್ಗವಾಗಿ ಹರಿಹರ ರಸ್ತೆಯ ಎನ್.ವಿ. ಹೊಟೇಲ್ವರೆಗೆ ಸಾಗಿ ಶೋಭಾಯಾತ್ರೆ ಕೊನೆಗೊಂಡಿತು. ಅಲ್ಲಿಂದ ಮೂರ್ತಿಯನ್ನು ಹರಿಹರದ ತುಂಗಭದ್ರಾ ನದಿಗೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಯಿತು. ನವದುರ್ಗೆಯರ ಪ್ರತಿರೂಪಗಳು, ಕೇರಳದ ವಿಶೇಷ ಕಲಾ ತಂಡಗಳು, ಸ್ಥಳೀಯ ಡೊಳ್ಳು ಕುಣಿತ, ಸಮಾಳ, ಹಲಗೆಮೇಳ, ನಂದಿಕಂಬ, ಭಜನೆ ಜಾಂಜ್, ಅಣುಕು ಗೊಂಬೆಗಳು, ಹುಲಿ ಕುಣಿತ, ಪೂಜಾ ಕುಣಿತ, ಚಂಡಿ ಮದ್ದಳೆ, ದೊಡ್ಡ ಹಲಗೆ, ಲೇಜಿಮ್, ಯಕ್ಷಗಾನ, ವೀರಗಾಸೆ ಹಾಗೂ ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ವಂದೇ ಮಾತರಂ ಸ್ವಯಂ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ನಗರಸಭೆ ಸದಸ್ಯರುಗಳಾದ ಹನುಮಂತಪ್ಪ ಹೆದ್ದೇರಿ, ಹುಚ್ಚಪ್ಪ ಮೆಡ್ಲೇರಿ, ಶೇಖಪ್ಪ ಹೊಸಗೌಡ್ರ, ನಾಗರಾಜ ಅಡ್ಮನಿ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ವೀರೇಶ ಹೆದ್ದೇರಿ, ಸಚಿನ್ ಬ್ಯಾಡಗಿ, ನಾಗರಾಜ ಕೋರವರ, ಮಂಜುನಾಥ ಬುರಡಿಕಟ್ಟಿ, ಶಿವಕುಮಾರ ಗೌಡಶಿವಣ್ಣನವರ, ಅಜಯ್ ಮಠದ, ನಾಗರಾಜ ತಳವಾರ, ವಿನಯಗೌಡ ಬಾಳನಗೌಡ, ಅನಿಲ ದಾವಣಗೆರೆ, ಜಗದೀಶ ಗೌಡಶಿವಣ್ಣನವರ, ಪ್ರಮೋದ ಯಳವಟ್ಟಿ ಸೇರಿದಂತೆ ಸಹಸ್ರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.