ಕನ್ನಡಪ್ರಭ ವಾರ್ತೆ ಕನಕಗಿರಿ
ಅಮವಾಸ್ಯೆ ನಿಮಿತ್ತ ಕನಕಾಚಲ ಹಾಗೂ ಲಕ್ಷ್ಮೀದೇವಿಗೆ ವಿಶೇಷ ಪೂಜೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ದೇವಸ್ಥಾನದಲ್ಲಿ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಂತರ ದೀಪೋತ್ಸವ ಕಾರ್ಯಕ್ರಮ ಆರಂಭಗೊಂಡಿತು. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹಣತೆಗಳನ್ನಿಟ್ಟಿದ್ದ ಭಕ್ತರು ತುಪ್ಪ, ಬತ್ತಿಯನ್ನು ಹಾಕಿ ದೀಪ ಬೆಳಗಿಸಿದರು.ಕನಕಾಚಲ, ಲಕ್ಷ್ಮೀ, ಸ್ವಸ್ಥಿಕ್, ಓಂ, ಕನಕಗಿರಿ, ಕೊಪ್ಪಳ, ಭಾರತ, ಕರ್ನಾಟಕ, ಎನ್ನುವ ದೀಪದ ಆಕೃತಿಗಳು ನೆರದಿದ್ದವರನ್ನು ಆಕರ್ಷಿಸಿದವು.
ವಿವಿಧೆಡೆ:ಭಾನುವಾರ ರಾತ್ರಿ ಐತಿಹಾಸಿಕ ತೊಂಡಿತೇವರಪ್ಪ, ಪ್ರತಾಪರಾಯ, ಸಂಜೀವಮೂರ್ತಿ, ಸಚ್ಚಿದಾನಂದ ಅವಧೂತಮಠ, ಪೇಟೆ ಬಸವೇಶ್ವರ, ತೇರಿನ ಹನುಮಪ್ಪ, ಆನೆಗೊಂದಿ ಅಗಸಿ ಆಂಜನೇಯಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೀಪ ಹಚ್ಚಿ ಸಂಭ್ರಮಿಸಿದರು.
ಕುಮ್ಮಟದುರ್ಗದಲ್ಲಿ ಕಾರ್ತಿಕ ದೀಪೋತ್ಸವ:ಗಂಗಾವತಿ ಸಮೀಪದ ಕುಮ್ಮಟದುರ್ಗದ ಕುಮಾರರಾಮ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ವಿಶೇಷ ಪೂಜೆ ಜರುಗಿತು. ಈ ಸಂದರ್ಭ ಕುಮಾರರಾಮನ ವಂಶಸ್ಥರಾದ ಎಚ್ .ರಾಜೇಶ್ ನಾಯಕ ದೊರೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಕುಮಾರರಾಮ ದೇವರಿಗೆ ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಲಾಗುತ್ತಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.ಈ ವೇಳೆ ಗಂಡುಗಲಿ ಕುಮಾರರಾಮ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರನಾಯಕ, ಹತ್ತಿಮರದ ಹನುಮಂತಪ್ಪ, ದೇವರಾಜ ತಳವಾರ ಭಾಗವಹಿಸಿದ್ದರು.