ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲದ ಗ್ರಾಮವೊಂದರಲ್ಲಿ ಇಡೀ ಬಂಜಾರ ಸಮುದಾಯದ ಜನರು ಒಟ್ಟಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಸಮಾಜಕ್ಕೆ ಮಾದರಿ, ದಾರಿದೀಪವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಈ ವಿಶಿಷ್ಟ ಮತ್ತು ಭಾವೈಕ್ಯತೆಯ ಆಚರಣೆ ನಡೆದಿದೆ. ಈ ತಾಂಡಾದಲ್ಲಿ ಸಂಪೂರ್ಣವಾಗಿ ಬಂಜಾರ ಸಮುದಾಯದವರೇ ವಾಸವಾಗಿದ್ದು, ಇಲ್ಲಿ ಯಾವುದೇ ಮುಸ್ಲಿಂ ಮನೆಗಳಿಲ್ಲ. ಆದಾಗ್ಯೂ, ಇಲ್ಲಿನ ಜನರಿಗೆ ಮೊಹರಂ ಹಬ್ಬದ ಮೇಲಿರುವ ಭಕ್ತಿ ಹಾಗೂ ನಂಬಿಕೆ ಮಾತ್ರ ಅನನ್ಯವಾದದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಇಡೀ ತಾಂಡಾದ ಜನತೆ ಒಂದಾಗಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.ಮೂರು ದಿನಗಳ ಕಾಲ ಪೂಜೆ: ಶೀರಿಹಳ್ಳಿ ತಾಂಡಾದಲ್ಲಿ ಸತತ ಮೂರು ದಿನಗಳ ಕಾಲ ಮೊಹರಂ ಆಚರಣೆಯ ಸಡಗರ ಮನೆಮಾಡಿತ್ತು. ಬಂಜಾರ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿ ಗ್ರಾಮದ ಖಾಜಾ ಬಂಧನ್ ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳೊಂದಿಗೆ ‘ಅಲೈದೇವರನ್ನು’ ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ನಿಷ್ಠೆಯಿಂದ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಹಾಗೂ ನೈವೇದ್ಯಗಳನ್ನು ಸಲ್ಲಿಸಿದರು.
ಕಷ್ಟಗಳನ್ನು ನೀಗಿಸುವ ದೇವರೆಂಬ ನಂಬಿಕೆ:
ನಂತರ ತಡೋ ದೇವರ ಬಳಿ ಹೋಗಿ ಪೂಜೆ ಸಲ್ಲಿಸಲಾಗುತ್ತೆ ನಂತರ, ಮೂರು ದಿನಗಳ ಕಾಲ ಶ್ರದ್ಧೆಯಿಂದ ವ್ರತ ಆಚರಿಸಿ ಧರಿಸಿದ್ದ ‘ಅಲೈ ಮಾಲೆ’ಯನ್ನು ಭಕ್ತರು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರು. ನೀರಲ್ಲಿ ಬಿಟ್ಟು ಪೂಜೆ ಸಲ್ಲಿಸುವುದರೊಂದಿಗೆ ಈ ವರ್ಷದ ಸೌಹಾರ್ದತೆಯ ಮೊಹರಂ ಆಚರಣೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.