ಏ.12ಕ್ಕೆ ಹನಮ ಮಹೋತ್ಸವ । 3ನೇ ವರ್ಷದ ಉತ್ಸವ । ಆಂಜನೇಯ ಸಮಿತಿ ಆಯೋಜನೆ । ವಿವಿಧ ಶ್ರೀಗಳು ಭಾಗಿ
ಏ.11ರಂದು ಶೋಭಯಾತ್ರೆ ನಡೆಯಲಿದ್ದು, ಏಪ್ರಿಲ್ 12 ರಂದು ಹನುಮ ಮಹೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಸ್ವಯಂಸೇವಕ ಮುನಿಯಪ್ಪ ತಿಳಿಸಿದರು.
ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಮೇಲಿನ ಸಭಾಂಗಣದಲ್ಲಿ ಗುರುವಾರ ಬೇಡಿ ಆಂಜನೇಯ ಆಡಳಿತ ಸಮಿತಿಯಿಂದ ಕರೆಯಲಾಗಿದ್ದ ತೃತೀಯ ವರ್ಷದ ಹನುಮ ಮಾಲಾಧಾರಿಗಳ ಹನುಮ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ನದಿ ದಡಗಳಲ್ಲಿನ ದೇವಸ್ಥಾನಗಳು ವಿಖ್ಯಾತಹೊಂದಿವೆ.ಆದರೆ ತಾಲೂಕಿನ ವಿಜಯನಗರ ಸಾಮ್ರಾಜ್ಯದಲ್ಲಿ ವಾಣಿಜ್ಯ ಕೇಂದ್ರವಾಗಿರುವ ತಾಲೂಕಿನ ಸಂತೆಮುದ್ದಾಪುರ ಗ್ರಾಮದಲ್ಲಿ ಆಂಜನೇಯ ದೇವಸ್ಥಾನ ಮಾತ್ರ ಉಳಿದು ಜನವಸತಿ ನಿರ್ಜನವಾಯಿತು. ಹನುಮಂತನ ದೇವಸ್ಥಾನವನ್ನು ಬಯಲಲ್ಲಿ ಬಿಡದೆ ಅಭಿವೃದ್ದಿಗೊಳಿಸಲು ಹನುಮಮಾಲೆ ಆರಂಭಿಸಲಾಗಿದೆ. ಹನುಮ ಸೇವಾ ಸಮಿತಿ ರಚಿಸಿಕೊಂಡು ಮುಂಬರುವ ದಿನಗಳಲ್ಲಿ ಭವ್ಯವಾದ ದೇವಾಲಯ ನಿರ್ಮಾಣಗೊಂಡು ತೀರ್ಥ ಕ್ಷೇತ್ರವಾಗಲು ಸರ್ವರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸಂತೆಮುದ್ದಾಪುರ ಬಳಿ ಬೇಡಿ ಆಂಜನೇಯ ದೇವಸ್ಥಾನ ಅಭಿವೃದ್ದಿಗೆ ಭಕ್ತಸಮೂಹ ಕೈಜೋಡಿಸಬೇಕು. ಹನುಮ ಮಾಲಾಧಾರಿಗಳಾಗಿ ಅಧಿಕ ಸಂಖ್ಯೆಯಲ್ಲಿ ಹನುಮ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದರು.
ಚಿತ್ರದುರ್ಗ ವಿಭಾಗ ಪ್ರಮುಖ್ ಓಂಕಾರ್, ಬೇಡಿ ಆಂಜನೇಯ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಬಿದರಕೆರೆ ಪ್ರಕಾಶ್, ಮುಖಂಡರಾದ ವಕೀಲ ಡಿ.ವಿ.ನಾಗಪ್ಪ,ಕೃಷ್ಣಮೂರ್ತಿ, ಬಿಸ್ತುವಳ್ಳಿ ಬಾಬು, ಎ.ಎಂ. ಮರುಳಾರಾಧ್ಯ, ಶಿವಕುಮಾರ್ ಸ್ವಾಮಿ, ಸತೀಶ್, ಕರಿಬಸಯ್ಯ, ಬಸವರಾಜ್, ಇತರರು ಇದ್ದರು.