ತವರಿಗೆ ಮರಳಿದ ಯೋಧನಿಗೆ ಮಂಡ್ಯದಲ್ಲಿ ಭವ್ಯ ಸ್ವಾಗತ

KannadaprabhaNewsNetwork |  
Published : Oct 05, 2025, 01:00 AM IST
4ಕೆಎಂಎನ್‌ಡಿ-5ಮಂಡ್ಯದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಿವೃತ್ತ ಯೋಧ ಕೆ.ಎಸ್. ಗುರುರಾಜ್ ಅವರನ್ನು ಭೀಮಪಡೆ ಸಂಘಟನೆ ಮುಖಂಡರು ಸ್ವಾಗತಿಸಿ, ಅಭಿನಂದಿಸಿದರು. | Kannada Prabha

ಸಾರಾಂಶ

ಯುವಕರು ಸೇನೆಗೆ ಸೇರಬೇಕೆಂಬುದು ನನ್ನ ಆಸೆಯಾಗಿದೆ. ಇಲ್ಲಿ ಶಿಸ್ತನ್ನು ಕಲಿಸುತ್ತದೆ. ಕರ್ನಾಟಕದವರು ಹೆಚ್ಚಾಗಿ ಭಾರತೀಯ ಸೇನೆಗೆ ನೇಮಕವಾಗಲಿ, ಆ ಮೂಲಕ ಭಾರತ ದೇಶದ ಸೇವೆ ಮಾಡಲು ಒಂದು ದೊಡ್ಡ ಅವಕಾಶ ಸಿಕ್ಕಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯಭಾರತೀಯ ಸೇನೆಯಲ್ಲಿ ೨೪ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧ ಕೆ.ಎಸ್.ಗುರುರಾಜ್ ಅವರನ್ನು ಭೀಮ ಪಡೆ ಸಂಘಟನೆ ಮುಖಂಡರು ಹಾಗೂ ಹೊನಗಾನಹಳ್ಳಿ ಮಠದ ಗ್ರಾಮಸ್ಥರು ನಗರದ ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಕೆ.ಎಸ್.ಗುರುರಾಜ್, ಯುವಕರು ಸೇನೆಗೆ ಸೇರಬೇಕೆಂಬುದು ನನ್ನ ಆಸೆಯಾಗಿದೆ. ಇಲ್ಲಿ ಶಿಸ್ತನ್ನು ಕಲಿಸುತ್ತದೆ. ಕರ್ನಾಟಕದವರು ಹೆಚ್ಚಾಗಿ ಭಾರತೀಯ ಸೇನೆಗೆ ನೇಮಕವಾಗಲಿ, ಆ ಮೂಲಕ ಭಾರತ ದೇಶದ ಸೇವೆ ಮಾಡಲು ಒಂದು ದೊಡ್ಡ ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಜಮ್ಮು ಕಾಶ್ಮೀರ, ರಾಜಸ್ಥಾನ್, ಅಸ್ಸಾಂ, ಅರುಣಾಚಲ ಪ್ರದೇಶ್, ಗುಜರಾತ್, ಪುಣೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೈನ್ಯದಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ದೇಶ ಸೇವೆಗಾಗಿ ಸದಾ ಸಿದ್ಧನಿದ್ದೇನೆ. ಎಂತಹ ಸಂದರ್ಭದಲ್ಲಿ ಸೇನೆ ಮತ್ತೆ ಕರೆಸಿಕೊಂಡರೆ ಹೋಗಲು ಸಿದ್ಧನಿರುವೆ ಎಂದು ದೃಢವಾಗಿ ಹೇಳಿದರು.

ರಾಷ್ಟ್ರೀಯ ಭೀಮ ಪಡೆಯ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ ಮಾತನಾಡಿ, ಹೊನಗಳ್ಳಿ ಮಠದ ಕಾಲೋನಿಯ ಯೋಧ ಗುರುರಾಜ್ ಅವರು ೨೪ ವರ್ಷ ಸೇವೆ ಸಲ್ಲಿಸಿ ಮತ್ತೆ ತವರೂರಿಗೆ ಆಗಮಿಸಿದ್ದಾರೆ. ಇಂತಹ ಯೋಧರನ್ನು ನಾವು ಗೌರವಯುತವಾಗಿ ಬರಮಾಡಿಕೊಳ್ಳುವುದು ಕರ್ತವ್ಯವಾಗಿದೆ. ಮುಂದಿನ ಜೀವನ ಅವರ ಕುಟುಂಬದಲ್ಲಿ ಕಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಆಶಿಸಿದರು.

ಯೋಧನ ಪತ್ನಿ ಮಹಾಲಕ್ಷ್ಮಿ, ಭೀಮ ಪಡೆಯ ರಾಜ್ಯಕಾರ್ಯದರ್ಶಿ ನಿತ್ಯಾನಂದ, ಜಿಲ್ಲಾಧ್ಯಕ್ಷ ಎಸ್.ಪಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಸುಧಾ ಹನುಮ, ಉಪಾಧ್ಯಕ್ಷ ಸುರೇಶ್, ಗ್ರಾಮಸ್ಥರಾದ ಮಹಾಲಿಂಗು, ಶ್ರೀನಿವಾಸ್, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉತ್ತಮ ಜೀವನ ಶೈಲಿ ಆರೋಗ್ಯದ ಗುಟ್ಟು: ವಿ.ಎಂ.ರವಿಕುಮಾರ್

ಕಿಕ್ಕೇರಿ:

ಉತ್ತಮ ಜೀವನ ಶೈಲಿ ಆರೋಗ್ಯದ ಗುಟ್ಟು. ಇದನ್ನು ಅರಿತರೆ ನೆಮ್ಮದಿ ಬದುಕು ಕಾಣಬಹುದು ಎಂದು ಪಿಡಿಒ ವಿ.ಎಂ.ರವಿಕುಮಾರ್ ತಿಳಿಸಿದರು.

ಆನೆಗೊಳ ಗ್ರಾಮ ಪಂಚಾಯ್ತಿಯಲ್ಲಿ ಕೂಲಿಕಾರ್ಮಿಕರಿಗಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಜಾಬ್‌ಕಾರ್ಡ್‌ ಹೊಂದಿರುವ ಫಲಾನುಭವಿಗಳನ್ನು ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಷ್ಟಪಡುವ ಶ್ರಮಿಕ ವರ್ಗದವರ ಆರೋಗ್ಯ ಕಾಪಾಡುವುದು ಇಲಾಖೆ ಕರ್ತವ್ಯವಾಗಿದೆ ಎಂದರು.

ಆರೋಗ್ಯಕರ, ಆರ್ಥಿಕ ಸ್ಥಿರತೆ ಸಮಾಜ ಕಾರ್ಮಿಕರದಿಂದ ಸಾಧ್ಯ. ಇವರಿಗೆ ಕೆಲಸ ಕೊಡುವಷ್ಟೆ ಆರೋಗ್ಯವನ್ನು ನೋಡಿಕೊಳ್ಳಬೇಕಿದೆ. ಆರೋಗ್ಯಕರ ಬದುಕಿದ್ದರೆ ಕೆಲಸ ಮಾಡಲು ಸಾಧ್ಯ. ಇದನ್ನರಿತು ಕಾರ್ಮಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಅರ್ಹ 50 ಫಲಾನುಭವಿಗಳಿಗೆ ಉಚಿತವಾಗಿ ಬಿಪಿ, ಮಧುಮೇಹ, ರಕ್ತ ಪರೀಕ್ಷೆ ಮಾಡಲಾಯಿತು. ಡಾ.ಪ್ರಸಾದ್, ಡಿ.ಕೆ.ನವೀನ್, ಪೂಜಾ, ವೀಣಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ