ಗಂಗಾವತಿ: ನಗರಕ್ಕೆ ಆಗಮಿಸಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಸತ್ಯನಾರಾಯಣ ದೇವಸ್ಥಾನದಲ್ಲಿ ಶ್ರೀಕೃಷ್ಣಪೂಜೆ, ತೊಟ್ಟಿಲು ಸೇವೆ, ಅನುಗ್ರಹ ಸಂದೇಶ, ಪ್ರಸಾದ ವಿತರಣೆ ನಡೆಯಿತು. ಬಳಿಕ ನಗರದ ವಿವಿಧ ಭಕ್ತರ ನಿವಾಸಕ್ಕೆ ತೆರಳಿದರು. ಆನಂತರ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ನಿವಾಸದಲ್ಲಿ ಪಾದಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕರ್ನಾಟಕ ಬ್ಯಾಂಕ್ನಿಂದ ₹10 ಲಕ್ಷ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶಾಖೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನಕ್ಕೆ ಕರ್ನಾಟಕ ಬ್ಯಾಂಕ್ನಿಂದ ₹10 ಲಕ್ಷ ಚೆಕ್ನ್ನು ಸ್ವಾಮೀಜಿಗೆ ನೀಡಲಾಯಿತು.
ಮಠದ ಮುಂಭಾಗದಲ್ಲಿ ಜರುಗಿದ ಧರ್ಮಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀ, ಎಲ್ಲರಿಂದ ಧಾರ್ಮಿಕತೆ, ಸಂಸ್ಕೃತಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ. ಮಕ್ಕಳಿಗೆ ಸಂಸ್ಕಾರ ನೀಡಬೇಕು, ರಾಮಾಯಣ, ಮಹಾಭಾರತದ ಬಗ್ಗೆ ತಿಳಿ ಹೇಳುವ ಕೆಲಸ ಪಾಲಕರು ಮಾಡಬೇಕಾಗಿದೆ ಎಂದರು.ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ದರೋಜಿ ರಂಗಣ್ಣ ಶ್ರೇಷ್ಟಿ, ನಾರಾಯಣರಾವ ವೈದ್ಯ, ವಾದಿರಾಜಚಾರ ಕಲ್ಮಂಗಿ, ನಗರಸಭಾ ಸದಸ್ಯ ವಾಸುದೇವ ನವಲಿ, ಅಮರೇಗೌಡ ಇದ್ದರು. ರಾಘವೇಂದ್ರ ದಂಡಿನ ಕಾರ್ಯಕ್ರಮ ನಿರೂಪಿಸಿದರು. ಪಂಡಿತ್ ವಾಗೀಶಚಾರ ಗೊರೆಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರಕ್ಕೆ ಆಗಮಿಸಿದ್ದ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ವರ್ಗದವರು ಪರೀಕ್ಷೆ ನಡೆಸುತ್ತಿರುವುದಕ್ಕೆ ದಲಿತರು ಅನುತ್ತೀರ್ಣ ಆಗುತ್ತಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, ಅರ್ಹತೆ, ಪರೀಕ್ಷೆ ಎಲ್ಲರಿಗೂ ಸಮಾನ. ಪರೀಕ್ಷೆಯಲ್ಲಿ ತಾರತಮ್ಯ ಇರುವುದಿಲ್ಲ. ಅವರವರ ಸಾಮರ್ಥ್ಯದ ಮೇಲೆ ಅವಲಂಬಿತರಾಗಿರುತ್ತಾರೆ. ಪರೀಕ್ಷೆಯನ್ನು ಯಾರು ಕಸಿದುಕೊಳ್ಳುವುದಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮಂದಿರ ನಿರ್ಮಿಸಿದ್ದು ದೊಡ್ಡದಲ್ಲ, ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಎಲ್ಲರಿಗೂ ಸಂಸ್ಕಾರ, ಸಂಸ್ಕೃತಿ, ದೇಶಪ್ರೇಮ ಇರಬೇಕು ಎಂದರು.ಅಯೋಧ್ಯೆಯಂತೆ ಅಂಜನಾದ್ರಿ ಬೆಟ್ಟ ಬೆಳೆಯಬೇಕು. ಎಲ್ಲ ಸ್ಥಳಗಳಲ್ಲಿ ಆಂಜನೇಯ ನೆಲೆಸಿದ್ದಾನೆ ಎಂದರು.