ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದರ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಸೆ. 22 ರಿಂದ ಆರಂಭವಾಗಿ ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಸಂಚರಿಸಿ ಗುರುವಾರ ಪಟ್ಟಣಕ್ಕಾಗಮಿಸಿತು. ತಹಸೀಲ್ದಾರ ರವೀಂದ್ರ ಹಾದಿಮನಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ರಥಕ್ಕೆ ಸ್ವಾಗತ ಕೋರಿದರು.
ಈ ವೇಳೆ ಪಂಚಾಯತಿ ಕಾರ್ಯನಿರ್ವಾಹಕ ಕಿರಣ ಘೋರ್ಪಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ವೈ. ತುಬಾಕದ, ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ. ದಳವಾಯಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಪಿಡಬ್ಲುಡಿ ಅಭಿಯಂತರ ಮಿರಜಕರ, ಕ್ಯೂರೇಟರ್ ರಾಘವೇಂದ್ರ, ವಿವೇಕ ಕುರುಗುಂದ ಇತರರು ಪೂಜೆ ಸಲ್ಲಿಸುವುದರ ಮೂಲಕ ಕನ್ನಡ ರಥವನ್ನು ಬರಮಾಡಿಕೊಂಡರು.ಮಹಿಳೆಯರು ಆರತಿ ಬೆಳಗಿ ಕುಂಭಮೇಳದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು,ಶಾಲಾ ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು , ಕನ್ನಡ ಸಾಹಿತ್ಯಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.