ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಮೆರವಣಿಗೆಗೆ ಮುನ್ನ ವಿವಿಧ ಜಾನಪದ ನೃತ್ಯ ಕಲಾ ತಂಡಗಳಿಂದ ಕನ್ನಡ ಗಾಯನಗಳಿಗೆ ನೃತ್ಯ ಪ್ರದರ್ಶನ ನೀಡಿದ್ದು ಜನಮನ ಸೆಳೆಯಿತು, ನೋಡುಗರ ಚಪ್ಪಾಳೆಗಳ ನಡುವೆ ಸ್ಥಳೀಯ ಕಲಾವಿದರ ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು ಸೇರಿದಂತೆ ಕಲಾ ತಂಡಗಳಿಂದ ಭರ್ಜರಿ ಸಂಭ್ರಮದ ಮೆರವಣಿಗೆ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯನ್ನು ಗುರುವಾರ ಅತ್ಯಂತ ಸಂಭ್ರಮ-ಸಡಗರದಿಂದ ಬರಮಾಡಿಕೊಳ್ಳಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಸ್ವಾಗತಿಸಿದರು.

ಮೆರವಣಿಗೆಗೆ ಮುನ್ನ ವಿವಿಧ ಜಾನಪದ ನೃತ್ಯ ಕಲಾ ತಂಡಗಳಿಂದ ಕನ್ನಡ ಗಾಯನಗಳಿಗೆ ನೃತ್ಯ ಪ್ರದರ್ಶನ ನೀಡಿದ್ದು ಜನಮನ ಸೆಳೆಯಿತು, ನೋಡುಗರ ಚಪ್ಪಾಳೆಗಳ ನಡುವೆ ಸ್ಥಳೀಯ ಕಲಾವಿದರ ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು ಸೇರಿದಂತೆ ಕಲಾ ತಂಡಗಳಿಂದ ಭರ್ಜರಿ ಸಂಭ್ರಮದ ಮೆರವಣಿಗೆ ಆರಂಭಗೊಂಡಿತು.

ಉಪಮೇಯರ್ ಬಿ. ಜಾನಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಪಾಲಿಕೆ ಆಯುಕ್ತ ಜಿ. ಖಲೀಲ್ ಸಾಬ್, ಅಬಕಾರಿ ಉಪನಿರೀಕ್ಷಕ ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಮೇಶ್ ಬಾಬು, ತಹಸೀಲ್ದಾರ್ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನುರಪ್ಪ ಸೇರಿದಂತೆ ಪಾಲಿಕೆ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.

ನಗರಕ್ಕೆ ಆಗಮಿಸಿದ ಕನ್ನಡಮ್ಮನ ರಥಯಾತ್ರೆ ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ನೋಂದಣಿ ಕಚೇರಿಯವರೆಗೆ ಸಾಗಿ ಮರಳಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಸಂಗಂ ವೃತ್ತಕ್ಕೆ ಬಂದು ರಾಘವ ಕಲಾ ಮಂದಿರದವರೆಗೆ ಕೊನೆಗೊಂಡಿತು.

ಮೆರವಣಿಗೆಯ ನಂತರ ಸಂಜೆ ರಾಘವ ಕಲಾಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಕನ್ನಡಪರ ಸಂಘಟನೆಗಳ ಸಾರಥ್ಯದಲ್ಲಿ ನಡೆದ ಈ ರಥಯಾತ್ರಗೆ ಶ್ರಮಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿ, ಗಮನ ಸೆಳೆದರು. 16 ಬಿಆರ್ ವೈ 4

ಬಳ್ಳಾರಿಗೆ ಗುರುವಾರ ಆಗಮಿಸಿದ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಯನ್ನು ಸಡಗರದಿಂದ ಬರಮಾಡಿಕೊಳ್ಳಲಾಯಿತು. 16ಬಿಆರ್‌ ವೈ 5

ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿದರು.

Share this article