ನೂರು ತೆಂಗಿನ ಕಾಯಿ ಒಡೆದು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರುಕನ್ನಡಪ್ರಭ ವಾರ್ತೆ ಚಳ್ಳಕೆರೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಮೂರನೇ ಬಾರಿಗೆ ರಚನೆಯಾಗುವ ಮೂಲಕ ಹ್ಯಾಟ್ರಿಕ್ ವಿಜಯಸಾಧಿಸಿದ ನರೇಂದ್ರ ಮೋದಿಯವರ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ರಾಜ್ಯದ ಐವರು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಗರದ ಶ್ರೀವೀರಭದ್ರಸ್ವಾಮಿ ದೇವಸ್ಥಾನ ಮುಂಭಾಗ ನೂರು ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ, ಮಾಜಿ ನಗರಸಭಾ ಸದಸ್ಯ ಡಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, 2024 ರ ಲೋಕಸಭಾ ಚುನಾವಣೆ ರಾಷ್ಟ್ರದ ಪಾಲಿಗೆ ಬಹುದೊಡ್ಡ ಚುನಾವಣೆಯಾಗಿ ವಿಶ್ವದ ಗಮನ ಸೆಳೆದಿತ್ತು. ಮೋದಿಯವರ ಹ್ಯಾಟ್ರಿಕ್ ವಿಜಯಕ್ಕೆ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಅಪಪ್ರಚಾರದ ಮೂಲಕ ಅಡ್ಡಿಪಡಿಸುತ್ತಿದ್ದವು. ಕಳೆದ ಹತ್ತು ವರ್ಷಗಳ ಎನ್ಡಿಎ ಸರ್ಕಾರದ ಸಾಧನೆ ವಿಶ್ವವೇ ಮೆಚ್ಚಿದ್ದರೂ ವಿರೋಧ ಪಕ್ಷಗಳು ಮಾತ್ರ ಮೋದಿ ವಿರುದ್ಧ ಅಪಪ್ರಚಾರದ ಅಸ್ತ್ರ ಪ್ರಯೋಗಿಸಿದರು. ಆದರೆ, ರಾಷ್ಟ್ರದ ಮತದಾರ ಮತ್ತೊಮ್ಮೆ ಮೋದಿ ಸರ್ಕಾರವನ್ನು ಬಯಸಿ ಮತ ನೀಡಿದ್ದಾನೆ. ಕೇಂದ್ರದಲ್ಲಿ ಯಶಸ್ವಿ ಆಡಳಿತ ನೀಡುವ ವಿಶ್ವಾಸವಿದೆ ಎಂದರು.ಬಿಜೆಪಿ ಮುಖಂಡ ನಿಂಬೆಹಣ್ಣು ಜಗದೀಶ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ 19 ಸ್ಥಾನಗಳಲ್ಲಿ ಜಯಗಳಿಸಿದೆ. ವಿಶೇಷವಾಗಿ ಬಿಜೆಪಿ, ಜೆಡಿಎಸ್ನ ಎಲ್ಲಾ ಹಂತದ ನಾಯಕರು ಚುನಾವಣಾ ಸಂದರ್ಭದಲ್ಲಿ ಅತ್ಯಂತ ವಿಶ್ವಾಸಪೂರ್ವಕವಾಗಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ರಾಜ್ಯದಲ್ಲಿ ಮೈತ್ರಿಕೂಟ ಮುನ್ನಡೆಗೆ ಕಾರಣರಾಗಿದ್ದಾರೆ. ಕೇಂದ್ರದಲ್ಲಿ ಐದು ಸಂಸದರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಐದು ಕೇಂದ್ರ ಸಚಿವರ ಕೊಡುಗೆ ಅಪಾರವಾಗಲಿದೆ ಎಂದರು.
ಈ ವೇಳೆ ನಗರಸಭಾ ಸದಸ್ಯರಾದ ವೆಂಕಟೇಶ್, ಪಾಲಮ್ಮ, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಜಗದಾಂಭ, ಶಾಂತಮ್ಮ ಮುಂತಾದವರು ಉಪಸ್ಥಿತರಿದ್ದರು.