ಮುಗಿಯದ ವಿದ್ಯಾನಗರದಲ್ಲಿ ನಿವೇಶನ ಮಾಲೀಕತ್ವದ ಕಗ್ಗಂಟು:
ವಿದ್ಯಾನಗರದಲ್ಲಿರುವ ನಿವೇಶನದ ಮಾಲೀಕತ್ವದ ವಿಚಾರ ನಿರ್ಮಾಪಕಿ ಪುಷ್ಪಾ ಪುಷ್ಪಾ ಹಾಗೂ ನಿವೇಶನದ ಜಿಪಿಎ ಹೋಲ್ಡರ್ ದೇವರಾಜು ಎಂಬುವವರ ನಡುವೆ ಶನಿವಾರ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.
ಶನಿವಾರ ನಿವೇಶನದ ಬಳಿ ಪುಷ್ಪಾ ಅವರು ಆಗಮಿಸಿದಾಗ ಜಿಪಿಎ ಹೋಲ್ಡರ್ ದೇವರಾಜು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಿವೇಶನದ ನಿಜವಾದ ಮಾಲೀಕತ್ವ ಮತ್ತು ದಾಖಲೆಗಳ ಬಗ್ಗೆ ಪುಷ್ಪಾ ಅವರು ಪ್ರಶ್ನೆ ಎತ್ತಿದ್ದು, ನಿವೇಶನಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ತೋರಿಸಿ ಎಂದು ಒತ್ತಾಯಿಸಿದ್ದಾರೆ. ದಾಖಲೆ ವಿಚಾರವಾಗಿ ಆರಂಭವಾದ ಮಾತುಕಥೆ ಕೆಲವೇ ಕ್ಷಣಗಳಲ್ಲಿ ವಾಗ್ವಾದಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಪುಷ್ಪಾ ಅವರು ಕೋಪೋದ್ರಿಕ್ತರಾಗಿ ಮಾತನಾಡಿ, ನಾನು ಸೆಲೆಬ್ರಿಟಿಯ ತಾಯಿ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿಯೇ ಹುಟ್ಟಿ ಬೆಳೆದವಳು. ನನ್ನ ಹಕ್ಕುಗಳಿಗಾಗಿ ನಿಲ್ಲುತ್ತಿದ್ದೇನೆ ಎಂದು ಹೇಳಿದರು. ಜೊತೆಗೆ, ಇನ್ನು ಮುಂದೆ ಈ ನಿವೇಶನದೊಳಗೆ ಕಾಲಿಡಬಾರದು ಎಂದು ದೇವರಾಜು ಅವರಿಗೆ ಎಚ್ಚರಿಕೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು, ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಕಾನೂನು ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ಹೇಳಿದ್ದು, ಇದರಿಂದ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪುಷ್ಪಾ ಅವರು, ರೌಡಿಗಳನ್ನು ಕರೆದುಕೊಂಡು ಬಂದು ರೌಡಿಸಂ ಮಾಡ್ತಿಯಾ? ಈ ವಿಚಾರವಾಗಿ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ನೇರವಾಗಿ ದೂರು ನೀಡುತ್ತೇನೆ. ಇನ್ನು ಮುಂದೆ ಇಲ್ಲಿಗೆ ಬಂದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಘಟನೆಯ ಸಮಯದಲ್ಲಿ ಸುತ್ತಮುತ್ತಲ ನಿವಾಸಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದು, ವಿದ್ಯಾನಗರ ಬಡಾವಣೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಿರಿಯರು ಹಾಗೂ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದ ಪರಿಣಾಮ, ದೊಡ್ಡ ಗಲಾಟೆ ತಪ್ಪಿದೆ. ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾರು ನಿಜವಾದ ಹಕ್ಕುದಾರರು, ಜಿಪಿಎ ಆಧಾರದ ಮೇಲೆ ದೇವರಾಜು ಅವರಿಗೆ ಇರುವ ಅಧಿಕಾರ ಎಷ್ಟರ ಮಟ್ಟಿಗೆ ಮಾನ್ಯ, ದಾಖಲೆಗಳ ನೈಜತೆ ಏನು ಎಂಬ ವಿಚಾರಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ಕಾರಣದಿಂದಾಗಿ ವಿವಾದ ಕಾನೂನು ಸಮರದ ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೆಲ ದಿನಗಳಲ್ಲಿ ನಿವೇಶನಕ್ಕೆ ಕಾಂಪೌಂಡ್ ಹಾಕುವುದಾಗಿನಿರ್ಮಾಪಕಿ ಪುಷ್ಪಾ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಅಧಿಕೃತ ಪೊಲೀಸ್ ದೂರು ದಾಖಲಾಗಿದೆಯೇ ಎಂಬ ಬಗ್ಗೆ ದೃಢ ಮಾಹಿತಿ ಲಭ್ಯವಾಗಿಲ್ಲ. ಆದರೆ, ಎರಡೂ ಪಾರ್ಟಿಗಳಿಂದ ಕಾನೂನು ಹಾದಿ ಹಿಡಿಯುವ ಸೂಚನೆಗಳು ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ತನಿಖೆ, ಕೋರ್ಟ್ ವ್ಯಾಜ್ಯ ಅಥವಾ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಒಟ್ಟಾರೆ, ನಿರ್ಮಾಪಕಿ ಪುಷ್ಪಾ ಅವರ ಹೆಸರು ಈ ವಿವಾದದಲ್ಲಿ ಮುನ್ನೆಲೆಗೆ ಬಂದಿರುವುದರಿಂದ, ವಿದ್ಯಾನಗರದ ನಿವೇಶನ ಮಾಲೀಕತ್ವದ ಕಗ್ಗಂಟು ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.