ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಭಿವೃದ್ಧಿ ಹೆಸರಿನಲ್ಲಿ ನಗರೀಕರಣದ ಹೆಸರಿನಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಬರುತ್ತಿದೆ ಅನ್ನೋ ನೆಪದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಮರಗಳ ಮಾರಣ ಹೋಮ ನಡೆಯುತ್ತಿದೆ.
ನಗರದ ಎರಡನೆ ವಾರ್ಡ್ನ ಭಗತ್ ಸಿಂಗ್ ನಗರ ಬಿಟ್ಟು ಮುಸ್ಟೂರು ಕಡೆ ಸಾಗುವ ರಸ್ತೆಗೆ ಅಂಟಿಕೊಂಡಂತೆ ಯಾರೋ ಲೇ ಔಟ್ ನಿರ್ಮಾಣ ಮಾಡುತಿದ್ದಾರೆ. ಅದರ ಪಕ್ಕದಲ್ಲಿಯೇ ಇರುವ ಪುರಾತನ ಕಾಲದ ಸುಮಾರು 200 ವರ್ಷಗಳಿಗೂ ಹಳೆಯದಾದ ಬೃಹತ್ ಆಲದ ಮರವೊಂದನ್ನು ಕಟಾವು ಮಾಡಿ ನೆಲಕ್ಕುರುಳಿಸಿದ್ದಾರೆ.ಕಟಾವು ಮಾಡಲು ಅನುಮತಿ ಕೊಟ್ಟವರ್ಯಾರು?:
ಹೇಗೆ ನೋಡಿದರೂ ಈ ಮರ ಕಟಾವು ಮಾಡಲು ಕಾರಣವೇ ಇಲ್ಲ ರಸ್ತೆಗೂ ಅಡ್ಡವಿಲ್ಲ ವಿದ್ಯುತ್ ಕಂಬದ ಲೈನ್ ಗಾಗಲಿ ಪಕ್ಕದ ಜಮೀನಿಗೆ ಹೋಗೋ ದಾರಿಗಾಗಲಿ ಅಡ್ಡ ಇಲ್ಲ ಆದ್ರೆ ಯಾಕೆ ಕಟಾವು ಮಾಡಿದರು? ಇದನ್ನ ಕಟಾವು ಮಾಡಲು ಅನುಮತಿ ಯಾರು ಕೊಟ್ಟರು? ಅನ್ನೋದೆ ಅನುಮಾನವಾಗಿದೆ.ಬೃಹತ್ ಆಲದ ಮರ ಕಟಾವು ಮಾಡಿ ರೆಂಬೆ ಕೊಂಬೆ ಸಾಗಿಸಿಬಿಟ್ಟಿರುವ ಆಸಾಮಿಗಳು, ಕಾಂಡ ಮಾತ್ರ ಅಲ್ಲಿಯೇ ಬಿಟ್ಟಿದ್ದಾರೆ ಆ ಕಾಂಡವೇ ಬೃಹತ್ ಗಾತ್ರದ ಮರದಂತೆ ಕಾಣುತಿದ್ದು ಇನ್ನು ರೆಂಬೆ ಕೊಂಟೆ ಟೊಂಗೆ ಎಲ್ಲಾ ಎಷ್ಟು ದೊಡ್ಡ ಗಾತ್ರವಿರಬಹುದು ಎಂದು ಊಹಿಸಲು ಆಗುತ್ತಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಪರಿಸರ ಪ್ರೇಮಿ ಗುಂಪುಮರದ ಆನಂದ್ ಮರ ಕಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 200 ವರ್ಷಗಳ ಹಿಂದೆ ಯಾವ ಪುಣ್ಯಾತ್ಮ ಈ ಮರವನ್ನು ನೆಟ್ಟಿದ್ದರೋ ಗೊತ್ತಿಲ್ಲಾ. ಪ್ರತಿನಿತ್ಯ ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ಆಮ್ಲಜನಕ ನೀಡುತ್ತಿತ್ತು. ಸಾಕಷ್ಟು ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯ ತಾಣವಾಗಿತ್ತು. ರಸ್ತೆಗಾಗಲಿ, ವಿದ್ಯುತ್ ಲೈನ್ ಗಾಗಲಿ, ಯಾರಿಗೆ ಆಗಲಿ ಈ ಮರದಿಂದ ತೊಂದರೆ ಯಾಗುತ್ತಿರಲಿಲ್ಲಾ, ಅಂತಹ ಬೃಹತ್ ಮರವನ್ನೇ ಕಡಿದು ಒಂದು ದೊಡ್ಡ ದುರಂತ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಈ ಮರ ಕಡಿಯಲಾಗಿದೆ, ಇದರಿಂದ ಯಾರಿಗೆ ಏನು ತೊಂದರೆಯಾಗಿದೆ ಇದನ್ನು ಕಡಿಯಲು ಯಾರು ಅನುಮತಿ ನೀಡಿದರು? ಒಂದು ವೇಳೆ ಯಾವುದಾದರೂ ಇಲಾಖೆಯವರು ಅನುಮತಿ ನೀಡಿದ್ದರೆ ಆ ಅಧಿಕಾರಿಗಳು ಹಾಗು ಕಡಿದು ಹಾಕಿದ ಆಸಾಮಿಗಳ ವಿರುದ್ದವೂ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದು ಕ್ರಮ ಕೈಗೊಳ್ಳದಿದ್ದರೆ ಪರಿಸರ ಪ್ರೇಮಿಗಳಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.