ಕನ್ನಡಪ್ರಭ ವಾರ್ತೆ ಹಾಸನ
ಯಾವುದೇ ಭಾಷೆ ಇರಲಿ ಅದನ್ನು ಪ್ರತಿನಿತ್ಯ ಬಳಸಿದಲ್ಲಿ ಮಾತ್ರ ಭಾಷೆ ಉಳಿಯುತ್ತದೆ ಎಂದು ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಿವಕುಮಾರ್ ಪಿ.ಆರ್. ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾಷೆಯನ್ನು ಬಳಸದೇ ಹೋದಲ್ಲಿ ಸಂಸ್ಕೃತಿಯು ಸಾಯುತ್ತದೆ. ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಸಾಯಿಸುತ್ತಾರೆ. ಇದರ ನೆನಪಾರ್ಥವಾಗಿ ವಿಶ್ವ ಮಾತೃಭಾಷಾ ದಿನವನ್ನು ಆಚರಿಸುತ್ತಾರೆ. ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಯುನೆಸ್ಕೋ ಈ ದಿನವನ್ನು ಆಚರಿಸುತ್ತಿದೆ. ಭಾಷೆ ರೂಪುಗೊಳ್ಳಬೇಕೆಂದರೆ ಎಷ್ಟೋ ತಲೆ ಮಾರಿನ ಕೊಡುಗೆ ಇದೆ. ಮಾತೆಯಿಂದ ಬಂದ ಭಾಷೆ ಮಾತೃ ಭಾಷೆಯಾಗಿದೆ. ಭಾಷೆ ವೈಜ್ಞಾನಿಕವಾಗಿ ಬಹಳಷ್ಟು ಅಂದವಾಗಿದೆ. ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮದ್ದಾಗಿದೆ. ಭಾಷಾ ಕೌಶಲ್ಯ ಇತ್ತೀಚೆಗೆ ಮರೆಮಾಚುತ್ತಿದೆ. ನಮ್ಮ ಆಲೋಚನೆ, ಯೋಚನೆ, ಯಾವತ್ತಿಗೂ ಮಾತೃ ಭಾಷೆಯಲ್ಲೇ ಇರುತ್ತದೆ. ಹೃದಯದಿಂದ ಬರುವಂತದ್ದು ಮಾತೃ ಭಾಷೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥರಾದ ದೇವರಾಜು ಎಚ್.ಡಿ, ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಬಹುಸಂಸ್ಕೃತಿಯನ್ನು ಹೊಂದಿರುವ ಜಗತ್ತಿನ ವಿಶೇಷವಾದ ದೇಶ ಎಂದರೆ ಭಾರತ. ೮,೫೦೦ ಭಾಷೆಗಳು ಪ್ರಪಂಚದಲ್ಲಿವೆ. ಭಾರತದಲ್ಲಿಯೇ ೨೦೦೦ ಭಾಷೆಗಳಿವೆ. ಸಂವಿಧಾನದಲ್ಲಿ ೪ನೇ ಅತೀ ದೊಡ್ಡ ಭಾಷೆಯಾಗಿ ನಮ್ಮಲ್ಲಿ ಹೆಚ್ಚಿನ ಗೌರವ ಸ್ಥಾನಮಾನ ನೀಡಲಾಗಿದೆ. ತಿಂಗಳಿಗೆ ಒಂದೊಂದು ಭಾಷೆ ಅವನತಿ ಹೊಂದುತ್ತಿವೆ. ಸ್ಥಳೀಯ ಭಾಷೆಗಳು ಪೈಪೋಟಿ ಕೊಡಲಾಗದೆ ಅಳಿವಿನ ಅಂಚಿನಲ್ಲಿವೆ. ನಮ್ಮೆಲ್ಲರ ಹೃದಯ ಭಾಷೆ ಕನ್ನಡ ಭಾಷೆ. ಹಳ್ಳಿ-ಹಳ್ಳಿಯನ್ನು ಆಂಗ್ಲ ಭಾಷೆ ಆವರಿಸಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್, ಭಾಷೆ ಮನುಷ್ಯನ ಭಾವನೆಗಳ ಅಭಿವ್ಯಕ್ತಿ. ಅವಿಭಾಜ್ಯ ಅಂಗ. ಅವರವರ ತಾಯಿ ಭಾಷೆಯನ್ನು ಗೌರವಿಸುವ ಪ್ರೋತ್ಸಾಹಿಸುವ ದಿನವೇ ಮಾತೃಭಾಷಾ ದಿನ. ಕನ್ನಡ ಭಾಷೆಗೆ ಮಾತ್ರ ರಕ್ಷಣಾ ಸಮಿತಿ ಇರುವುದು. ಕನ್ನಡಿಗರಿಗೆ ಸಂದೇಶ ಕೊಡುವುದು. ಶ್ರೇಷ್ಠತೆಯನ್ನು ಕಾಪಾಡುವ ಮೂಲಕ ಭಾಷೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಕರಾದ ಡಾ.ಮುರುಳೀಧರ ಕೆ.ಡಿ, ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ.ಸತ್ಯಮೂರ್ತಿ, ಕಾರ್ಯಕ್ರಮ ಸಂಚಾಲಕರಾದ ಡಾ. ಪ್ರಮೀಳಾ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಬಿ.ಎಚ್, ಸಹ ಪ್ರಾಧ್ಯಾಪಕ ಡಾ. ದಿನೇಶ್ ಕೆ.ಎಸ್., ಸಹಾಯಕ ಪ್ರಾಧ್ಯಾಪಕರಾದ ಅನುರಾಧ ಡಿ.ಆರ್, ಅನಿತಾ.ವೈ.ಆರ್. ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟನರಸಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಭಾವನಾ ಮತ್ತು ತಂಡವರು ಪ್ರಾರ್ಥನೆ ಮಾಡಿದರು.