ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕೊರೆಯಲು ಅಡ್ಡಿಯಾದ ಕಲ್ಲಿನ ಪದರ

KannadaprabhaNewsNetwork |  
Published : Jun 09, 2024, 01:30 AM ISTUpdated : Jun 09, 2024, 09:03 AM IST
ಟಿಬಿಎಂ | Kannada Prabha

ಸಾರಾಂಶ

ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಸುರಂಗ ಕಾಮಗಾರಿಯಲ್ಲಿ ಕಲ್ಲಿನ ಪದರ ಅಡ್ಡಿಯಾದ ಕಾರಣ ಟಬಿಎಂ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತ ಆಗಸ್ಟ್‌ನಲ್ಲಿ ಸುರಂಗ ಪೂರ್ಣಗೊಳ್ಳುವುದು ಅನುಮಾನ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿದೆ.

 ಬೆಂಗಳೂರು :  ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಸುರಂಗ ಕಾಮಗಾರಿಯಲ್ಲಿ ಕಲ್ಲಿನ ಪದರ ಅಡ್ಡಿಯಾದ ಕಾರಣ ಟಬಿಎಂ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತ ಆಗಸ್ಟ್‌ನಲ್ಲಿ ಸುರಂಗ ಪೂರ್ಣಗೊಳ್ಳುವುದು ಅನುಮಾನ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿದೆ.

ಒಟ್ಟಾರೆ 21.26 ಕಿ.ಮೀ. ‘ಗುಲಾಬಿ’ ಕಾರಿಡಾರ್ ಇದಾಗಿದ್ದು, 13.09 ಕಿ.ಮೀ. ಸುರಂಗ ಮಾರ್ಗ ಹೊಂದಿದೆ. ಅಂದರೆ ನಿಲ್ದಾಣ ಹೊರತುಪಡಿಸಿ ಹೋಗಿ ಬರುವ ಜೋಡಿ ಮಾರ್ಗ ಸೇರಿ 20.99 ಕಿ.ಮೀ. ಸುರಂಗ ನಿರ್ಮಾಣವಾಗುತ್ತದೆ, ಶೇ.97 ರಷ್ಟು ಕಾಮಗಾರಿ ಮುಗಿದಿದೆ. ಸದ್ಯ ತುಂಗಾ, ಭದ್ರಾ ಟಿಬಿಎಂ ಮಷಿನ್‌ಗಳು ಕಳೆದ ತಿಂಗಳಿಂದ ಕೊನೆ ಹಂತದ ಕೆಲಸ ನಡೆಸುತ್ತಿವೆ. ತುಂಗಾ ಟಿಬಿಎಂ ಕೆ.ಜೆ.ಹಳ್ಳಿಯಿಂದ ನಾಗವಾರದವರೆಗೆ 938 ಮೀ. ಹಾಗೂ ಭದ್ರಾ ಟಿಬಿಎಂ ಇದೇ ಮಾರ್ಗವಾಗಿ 939 ಮೀ. ಸುರಂಗ ಕೊರೆಯುತ್ತಿವೆ.

6.8 ಮೀ. ಹೊರವೃತ್ತ ವ್ಯಾಸ 5.8 ಮೀ. ಒಳವೃತ್ತದ ವ್ಯಾಸ ಹೊಂದಿರುವ ಟಿಬಿಎಂ ಮಷಿನ್‌ಗಳು ಮಣ್ಣಿನ ಪದರ ಇದ್ದರೆ ಒಂದು ನಿಮಿಷಕ್ಕೆ 10-12 ಮಿಲಿ ಮೀಟರ್‌ ಚಲಿಸಿ ಸುರಂಗ ಕೊರೆಯುತ್ತದೆ. ಕಲ್ಲಿನ ಪದರ ಎದುರಾದರೆ 1-2 ಮಿಲಿ ಮೀಟರ್‌ ಮಾತ್ರ ಸುರಂಗ ಕೊರೆಯುತ್ತದೆ. ಇವು ದಿನಕ್ಕೆ ಸುಮಾರು 4-6 ಮೀ. ಕ್ರಮಿಸುತ್ತವೆ. ಸದ್ಯ ಸುರಂಗದಲ್ಲಿ ಬೃಹತ್‌ ಕಲ್ಲುಗಳ ಪದರಗಳು ಅಡ್ಡಿಯಾದ ಕಾರಣ ದಿನಕ್ಕೆ ನಿಗದಿತ ಪ್ರಮಾಣದ ಸುರಂಗ ಕೊರೆಯಲು ಸಾಧ್ಯವಾಗುತ್ತಿಲ್ಲ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಅಂದುಕೊಂಡಂತೆ ಕಾಮಗಾರಿ ನಡೆಯುತ್ತಿದ್ದರೆ ಆಗಸ್ಟ್‌ನಲ್ಲಿ ಸುರಂಗ ಕೆಲಸ ಪೂರ್ಣವಾಗಿ ಮುಗಿಯಬೇಕಿತ್ತು. ಆದರೆ, ಈಗ ಟಿಬಿಎಂಗಳಿಗೆ ಕಲ್ಲನ್ನು ಕೊರೆದು ಮುಂದೆ ಹೋಗಬೇಕಾದ ಸವಾಲಿದೆ. ಹೀಗಾಗಿ ಡೆಡ್‌ಲೈನ್‌ ಒಳಗೆ ಪೂರ್ಣ ಪ್ರಮಾಣದ ಕೆಲಸ ಮುಗಿಸುವುದು ಕಷ್ಟವಾಗಲಿದೆ. ಸಹಜವಾಗಿ ಇನ್ನಿತರ ಕೆಲಸಗಳು ವಿಳಂಬವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಗುಲಾಬಿ ಮಾರ್ಗ ಗೊಟ್ಟಿಗೆರೆ ನಾಗವಾರದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ ಬಹುತೇಕ ವಾಣಿಜ್ಯ ವಹಿವಾಟು ಪ್ರದೇಶದಲ್ಲೇ ಸುರಂಗ ಮಾರ್ಗ ಹಾದುಹೋಗುತ್ತಿದೆ. ಸುರಂಗದ ಕೆಲಸ ಒಟ್ಟಾರೆ ನಾಲ್ಕು ಪ್ಯಾಕೇಜ್‌ನಲ್ಲಿ ನಡೆಸಲಾಗಿದ್ದು, ಮೂರು ಪ್ಯಾಕೇಜ್‌ ಕೆಲಸ ಮುಗಿದಿದೆ. ಆವನಿ, ಲಾವಿ, ಊರ್ಜಾ, ವಿಂಧ್ಯಾ, ರುದ್ರ, ವರದಾ, ವಾಮಿಕಾ ಟಿಬಿಎಂಗಳು ತಮ್ಮ ಕೆಲಸ ಮುಗಿಸಿವೆ. ಈ ಸುರಂಗ ಮಾರ್ಗದಲ್ಲಿ 12, ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳು ನಿರ್ಮಾಣ ಆಗುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ