ಧಾರವಾಡ: ಕಳೆದ ಹಲವು ವರ್ಷಗಳಿಂದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಏರ್ಪಡಿಸುತ್ತಿರುವ ಧಾರವಾಡ ಕಟ್ಟೆ ಸ್ವಾಯತ್ತ ಸಂಸ್ಥೆಯು ಇದೀಗ ರಾಯಚೂರಿನ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಸಿವಿಜಿ ಪಬ್ಲಿಕೇಷನ್ಸ್ ಜತೆಗೂಡಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಆ. 9 ರಿಂದ ಶೇಕ್ಸಪೀಯರ್ನ ನಾಟಕಗಳ ಉಪನ್ಯಾಸ ಮಾಲಿಕೆಯನ್ನು ಆರಂಭಿಸುತ್ತಿದೆ.
ಆ. 9ರಂದು ಸಂಜೆ 5.30ಕ್ಕೆ ಮಾಲಿಕೆಯು ಉದ್ಘಾಟನೆ ಜರುಗಲಿದ್ದು, ರಾಯಚೂರಿನ ಆದಿಕವಿ ಮಹಿರ್ಷಿ ವಾಲ್ಮೀಕಿ ವಿವಿ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಉದ್ಘಾಟಿಸುವರು. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹಾಗೂ ಬಾಗಲಕೋಟೆಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅತಿಥಿಗಳಾಗಿ ಭಾಗವಹಿಸುತ್ತಾರೆ. ಶೇಕ್ಸಪೀಯರ್ ನಾಟಕಗಳ ಈ ಹೊತ್ತಿನ ಓದು ಕುರಿತು ಲೇಖಕ ಡಾ. ಆರ್.ಜಿ. ಹೆಗಡೆ ವಿಶೇಷ ಉಪನ್ಯಾಸ ನೀಡುತ್ತಾರೆ. ಶೇಕ್ಸಪೀಯರ್ ದುರ್ಬಲ ಪಾತ್ರಗಳ ನೋವು- ನಲಿವು ಕುರಿತು ಪ್ರೊ. ವೆಂಕಟಗಿರಿ ದಳವಾಯಿ ಉಪನ್ಯಾಸ ನೀಡುತ್ತಾರೆ. ಪ್ರಕಾಶಕ ಸಿ.ವಿ.ಜಿ. ಚಂದ್ರು ಇರುತ್ತಾರೆ ಎಂದು ಮಾಹಿತಿ ನೀಡಿದರು.
ಈ ವರ್ಷದಿಂದ ಮಹರ್ಷಿ ವಾಲ್ಮೀಕಿ, ಡಾ. ರಾಜಕುಮಾರ, ಕಲ್ಯಾಣ ಶ್ರೀ ಎಂಬ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಧಾರವಾಡ ಕಟ್ಟೆ ಸ್ಥಾಪಿಸುತ್ತಿದ್ದು, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡದ ವಿಷಯದಲ್ಲಿ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಧಾರವಾಡ ಕಟ್ಟೆಯ ಬಹುತೇಕ ಕಾರ್ಯಕ್ರಮಗಳು ಆಪ್ಲೈನ್ ಹಾಗೂ ಆನಲೈನ್ನಲ್ಲಿಯೇ ನಡೆಯುತ್ತಿದ್ದು, ಸಾವಿರ ಜನರು ಸದಸ್ಯರಾಗಿದ್ದಾರೆ. ಕಳೆದ ವರ್ಷದಿಂದ ಪುರುಷ ಕಟ್ಟೆ ಎಂಬ ಕನ್ನಡ ಮಾಸಪತ್ರಿಕೆಯನ್ನು ಸಹ ಸಂಸ್ಥೆಯು ನಡೆಸುತ್ತಿದೆ ಎಂದು ಡಾ. ಬಸವರಾಜ ಡೋಣೂರ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಡಾ. ಡಿ.ಎಂ. ಹಿರೇಮಠ, ಡಾ. ಪ್ರಶಾಂತ ಮಾಂಡ್ರೆ, ಪ್ರಕಾಶ ಬಾಳಿಕಾಯಿ, ಶ್ರೀನಿವಾಸ ಸೊರಟೂರ ಇದ್ದರು.