ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕ್ಕೆ ಚಾಲನೆ
ಚಾಮರಾಜನಗರ: ಮನುಷ್ಯ ಸತ್ತ ನಂತರ ಅವರ ನೇತ್ರಗಳನ್ನು ದಾನ ಮಾಡಿದರೆ ನೇತ್ರಗಳು ಸದಾ ಜೀವಂತವಾಗಿರಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ೩೯ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದು, ಇದು ಕುಟುಂಬದ ಸಾಂಪ್ರದಾಯವಾದಲ್ಲಿ ಕಾರ್ನಿಯಾ ಅಂಧರಿಗೂ ದೃಷ್ಟಿ ನೀಡಬಹುದಾಗಿದೆ ಎಂದು ತಿಳಿಸಿದರು.
ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸೆ.೮ ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಕಾಲೇಜಿನ ನೇತ್ರ ವಿಭಾಗದ ಮುಖ್ಯಸ್ಥರು, ಸ್ನಾತಕೋತ್ತರ ವಿದ್ಯಾರ್ಥಿಗಳು ಪಿಪಿಟಿ ಮೂಲಕ ನೇತ್ರದಾನ, ನೇತ್ರದಾನದ ಮಹತ್ವ, ನೇತ್ರದಾನವನ್ನು ಸಂಗ್ರಹಿಸುವ ವಿಧಾನ, ನೇತ್ರದಾನದ ಬಗ್ಗೆ ಇರುವ ತಪ್ಪುನಂಬಿಕೆಗಳ ಬಗ್ಗೆ ತಿಳಿಸಿದರು.ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಡಾ. ಚಂದ್ರಶೇಖರ್, ಡಾ. ಮಹೇಶ್ವರ್, ಡಾ. ಬಾಲಸುಬ್ರಮಣ್ಯ, ಡಾ. ಗಿರೀಶ್ ಪಾಟೀಲ್ ಹಾಜರಿದ್ದರು.