ಹಣದ ಆಸೆಗೆ ಬಿದ್ದು ತಾಯಿ ತನ್ನ ಗಂಡನಿಗೂ ತಿಳಿಸದೆ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ರಾಮನಗರ
ಹಣದ ಆಸೆಗೆ ಬಿದ್ದು ತಾಯಿ ತನ್ನ ಗಂಡನಿಗೂ ತಿಳಿಸದೆ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಸಂಬಂಧ ಪತಿ ಸದ್ದಾಂ ಪಾಷಾ ಎಂಬುವರು ಪತ್ನಿ ನಸ್ರೀನ್ ತಾಜ್ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಏನಿದು ಘಟನೆ?: ರಾಮನಗರದ ಯಾರಬ್ ನಗರದ ನಿವಾಸಿ ಸದ್ದಾಂ ಪಾಷ ಮತ್ತು ಜಿಯಾವುಲ್ಲಾ ಬ್ಲಾಕ್ ನಿವಾಸಿ ನಸ್ರೀನ್ ತಾಜ್ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಲಡ್ಡ ಆರೀಫ್ ಪಿಲ್ಲೇಚೆರಿ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ದಂಪತಿಗೆ ಬಿಬಿ ಆಯಿಷಾ, ಮಹಮ್ಮದ್ ಫಾರನ್ ಮತ್ತು ಮಹಮ್ಮದ್ ಸಾಹಿಲ್ (ಅವಳಿ ಮಕ್ಕಳು) ಎಂಬ ಎರಡೂವರೆ ವರ್ಷದ ಮಕ್ಕಳು ಇದ್ದರು. ತಿಂಗಳ ಹಿಂದೆ ನಸ್ರೀನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮನೆಯಲ್ಲಿ ಪತ್ನಿ, ಮಕ್ಕಳ ಜೊತೆಗೆ ಆಕೆಯ ತಾಯಿ ತಸ್ಕೀನ್ ತಾಜ್ ವಾಸವಿದ್ದರು.ಸದ್ದಾಂ ಪಾಷ ಸಾಕಷ್ಟು ಸಾಲ ಮಾಡಿಕೊಂಡಿದ್ದನು. ಈ ಸಾಲ ತೀರಿಸುವ ಕಾರಣಕ್ಕಾಗಿ ಕೊನೆಯ ಮಗುವನ್ನು ಮಾರಾಟ ಮಾಡುವಂತೆ ನಸ್ರೀನ್, ಸದ್ದಾಂಗೆ ಪೀಡಿಸುತ್ತಲೇ ಬಂದಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದು. ಕೊನೆಗೆ ಡಿ.5ರಂದು ಪತಿ ಕೆಲಸಕ್ಕೆ ಹೋಗಿದ್ದಾಗ ನಸ್ರೀನ್ ಸ್ಥಳೀಯರಾದ ಅಸ್ಲಾಂ ಹಾಗೂ ಫಾಹಿಮಾ ಸಹಾಯದೊಂದಿಗೆ ಬೆಂಗಳೂರಿನ ನಿವಾಸಿ ತರನಂ ಸುಲ್ತಾನ ಎಂಬುವವರಿಗೆ ಗಂಡು ಮಗುವನ್ನು ನೀಡಿದ್ದಾಳೆ. ತರನಂ ಸುಲ್ತಾನ್ ಆ ಮಗುವನ್ನು ತನ್ನ ಸಂಬಂಧಿ ಶಾಜಿಯಾ ಬಾನು ಅವರಿಗೆ ಮಾರಾಟ ಮಾಡಿದ್ದಾಳೆ. ಪತಿ - ಪತ್ನಿ ನಡುವೆ ಗಲಾಟೆ: ಇನ್ನು ಪತಿ ಸದ್ದಾಂ ಪಾಷ ಕೆಲಸ ಮುಗಿಸಿ ಮನೆಗೆ ಬಂದ ಸಂದರ್ಭದಲ್ಲಿ ಮಗು ಎಲ್ಲೆಂದು ವಿಚಾರಿದ್ದಾನೆ. ಈ ವೇಳೆ ನಸ್ರೀನ್ ಮಗುವಿಗೆ ಹುಷಾರಿಲ್ಲ ಸಂಬಂಧಿಕರು ಕರೆದುಕೊಂಡು ಹೋಗಿದ್ದು, ಬೆಳಗ್ಗೆ ವಾಪಸ್ಸು ಬಿಡುತ್ತಾರೆ ಎಂದು ಸಮಜಾಯಿಸಿ ನೀಡಿದ್ಧಾಳೆ. ಪತ್ನಿಯ ಮಾತನ್ನು ನಂಬಿದ್ದ ಸದ್ದಾಂ ಪಾಷ ಊಟ ಮುಗಿಸಿ ಮಲಗಿದ್ದಾನೆ. ಮರು ದಿನವೂ ಮಗುವಿಗಾಗಿ ದಂಪತಿ ನಡುವೆ ಗಲಾಟೆ ನಡೆದು ಸದ್ದಾಂ ತಲೆಗೆ ಪೆಟ್ಟು ಬಿದ್ದಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಗು ಎಲ್ಲೆಂದು ಕೇಳಿದಾಗ ಪತ್ನಿ, ಸಂಜೆ ಅಥವಾ ನಾಳೆ ಬೆಳಗ್ಗೆ ಬರುತ್ತಾರೆಂದು ಹೇಳಿದ್ದಾಳೆ.ಅದರಂತೆ ಡಿ.7ರಂದು ಬೆಳಗ್ಗೆ 9 ಗಂಟೆಗೆ ಮಗುವಿನ ಸಮೇತ ಅಸ್ಲಾಂ ಮತ್ತು ಇಬ್ಬರು ಮಹಿಳೆಯರು ಮನೆಗೆ ಬಂದಿದ್ದಾರೆ. ಆಗ ಸದ್ದಾಂರವರು ಅಸ್ಲಾಂನನ್ನು ವಿಚಾರ ಮಾಡಿದಾಗ ಪೂಲ್ ಬಾಗ್ ನಿವಾಸಿ ಫಾಹಿಮಾ ಮುಖಾಂತರ ಫಾಹಿಮ ಸ್ನೇಹಿತೆ ಬೆಂಗಳೂರಿನ ಬಿವಾಸಿ ತರನಂ ಸುಲ್ತಾನ ಅವರಿಗೆ ತಿಳಿಸಿ, ಅವರಿಂದ ತರನಂ ಸುಲ್ತಾನ ಸಂಬಂಧಿ ಶಾಜಿಯಾ ಬಾನು ಅವರಿಗೆ ಮಗುವನ್ನು ₹1.50 ಲಕ್ಷಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.ಆನಂತರ ಡಿ.7ರಂದು ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಸದ್ದಾಂ ಪಾಷ ತನ್ನ ಪತ್ನಿ ನಸ್ರೀನ್ ತಾಜ್ , ಅಸ್ಲಾಂ, ತರನಂ ಸುಲ್ತಾನ, ಫಾಹಿಮಾ, ಶಾಜಿಯಾ ಬಾನು ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ರಾಮನಗರ ಯಾರಬ್ ನಗರದ ನಿವಾಸಿಗಳಾದ ಸದ್ದಾಂ ಪಾಷ ಹಾಗೂ ನಸ್ರೀನ್ ದಂಪತಿ ಮಗುವನ್ನು ರಕ್ಷಿಸಲಾಗಿದ್ದು, ಪೋಷಣೆ ಮಾಡಲಾಗುತ್ತಿದೆ.- ರಂಜಿತಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮನಗರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.