ಉಡುಪಿ: ಇಲ್ಲಿನ ಕುಂಜಿಬೆಟ್ಟಿನಲ್ಲಿ ನಗರಸಭೆಗೆ ಸೇರಿದ ವಾಹನವೊಂದು ಬೀದಿ ನಾಯಿಗೆ ಡಿಕ್ಕಿ ಹೊಡೆದು, ಗಾಯಗೊಂಡ ನಾಯಿಗೆ ಚಿಕಿತ್ಸೆ ಕೊಡಿಸದೆ ಸ್ಥಳದಿಂದ ತೆರಳಿದ ಬಗ್ಗೆ ಪರಿಹಾರ ಪಾವತಿಸುವಂತೆ ನಗರಸಭೆಗೆ ಕಾನೂನು ನೋಟಿಸ್ ಜಾರಿಗೊಳಿಸಲಾಗಿದೆ. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ ಬಬಿತಾ ರಾಜ್ ಅವರು ಉಡುಪಿ ನಗರಸಭೆ ಆಯುಕ್ತರಿಗೆ ಈ ನೋಟಿಸ್ ಸಲ್ಲಿಸಿದ್ದಾರೆ.
ಈ ಘಟನೆ ಮೋಟಾರು ವಾಹನ ಕಾಯ್ದೆ 1988 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಉಲ್ಲಂಘನೆಯಾಗಿದ್ದು, ಬೀದಿನಾಯಿಗಳನ್ನು ರಕ್ಷಿಸಬೇಕಾದ ನಗರಸಭೆಯ ವಾಹನದಿಂದಲೇ ಗಾಯಗೊಂಡ ಪ್ರಾಣಿಗೆ ನೆರವು ನೀಡದೆ ಸ್ಥಳದಿಂದ ತೆರಳಿರುವುದು ಗಂಭೀರ ಅಪರಾಧವಾಗಿದೆ. ಸಂಬಂಧಿತ ವಾಹನ ಹಾಗೂ ಚಾಲಕನನ್ನು ತಕ್ಷಣ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಗಾಯಗೊಂಡ ನಾಯಿಯ ಚಿಕಿತ್ಸೆಗೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ರಕ್ತ ವರ್ಗಾವಣೆ, ಪುನರ್ವಸತಿ ಹಾಗೂ 2 - 3 ತಿಂಗಳ ಆರೈಕೆ ಸೇರಿದಂತೆ ಸುಮಾರು 30 ಸಾವಿರ ರು. ವೆಚ್ಚವಾಗಲಿದ್ದು, ಈ ಮೊತ್ತವನ್ನು 7 ದಿನಗಳೊಳಗೆ ನಗರಸಭೆಯೇ ಭರಿಸಬೇಕು ಎಂದು ನೋಟಿಸ್ನಲ್ಲಿ ಆಗ್ರಹಿಸಲಾಗಿದೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ನೊಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.