-ದಲಿತ ಸಮುದಾಯದಿಂದ ಅಂಬೇಡ್ಕರ್ ವೃತ್ತದಲ್ಲಿ ಸಂಭ್ರಮಾಚರಣೆ
ಕನ್ನಡಪ್ರಭವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರಗಳು ಎಸ್ಸಿಎಸ್ಟಿ ಜನರಿಗೆ ಒಳಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ದಲಿತ ಸಮುದಾಯದ ಬದುಕಿಗೆ ಹೊಸ ಆತ್ಮವಿಶ್ವಾಸ ಉಂಟು ಮಾಡಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ತಿಳಿಸಿದ್ಧಾರೆ.ಸವೋಚ್ಚ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿದ ಹಿನ್ನೆಲೆ ದಲಿತ ಸಮುದಾಯದ ಎಲ್ಲಾ ವರ್ಗಗಳು ಹೃತ್ಪೂರ್ವಕವಾಗಿ ಸ್ವಾಗತಿಸುತ್ತವೆ ಎಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಒಳಮೀಸಲಾತಿ ನೀಡಿದ ಫಲವಾಗಿ ಈ ಸಮುದಾಯದ ಶೋಷಣೆ ಮುಕ್ತ ಸಮುದಾಯದವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ನಾಡಿನ ಮಾದಿಗ ಸಮುದಾಯಕ್ಕೆ ಈ ತೀರ್ಫು ವರವಾಗಿ ಪರಿಣಮಿಸಲಿದೆ. ಕಾರಣ, ನಿರಂತರ ಹೋರಾಟದಿಂದ ಸಮುದಾಯ ಬಳಲಿ ಬೆಂಡಾಗಿದ್ದು, ಶೋಷಿತರ ಪಾಲಿಗೆ ಮೀಸಲಾತಿ ಕನಸಾಗಿತ್ತು. ಆದರೆ, ಅಂತಿಮವಾಗಿ ಪ್ರಾಮಾಣಿಕ ಹೋರಾಟಕ್ಕೆ ಸುಪ್ರೀಂಕೋರ್ಟ್ ಜಯವನ್ನು ನೀಡಿದೆ. ದಲಿತರ ಬಾಳಿನಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಒಳಮೀಸಲಾತಿ ಸಮುದಾಯಕ್ಕೆ ವರವಾಗಿ ಪರಿಣಮಿಸಲಿದೆ ಎಂದರು.
ದಲಿತ ಮುಖಂಡರಾದ ಆರ್.ಡಿ.ಮಂಜುನಾಥ, ಎಚ್.ಲಂಕಪ್ಪ, ಮಾರುತಿ, ಕಾಂತರಾಜ್, ಬಂಡೆರಂಗಪ್ಪ, ಭೀಮಣ್ಣ, ಚನ್ನಗಾನಹಳ್ಳಿಮಲ್ಲೇಶ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.-------
ಪೋಟೋ: ೧ಸಿಎಲ್ಕೆ೩ ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಮುದಾಯಕ್ಕೆ ಒಳಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆ ಸಂಭ್ರಮಾಚರಿಸಿದರು.