ಶಾಂತಿಯುತ ಜೀವನವೇ ದೇವರಿಗೆ ಪ್ರಿಯ

KannadaprabhaNewsNetwork | Published : Sep 17, 2024 12:56 AM

ಸಾರಾಂಶ

ಶಾಂತಿಯುತ ಜೀವನವೇ ದೇವರಿಗೆ ಪ್ರಿಯ

ಕನ್ನಡಪ್ರಭ ವಾರ್ತೆ, ತುಮಕೂರುಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ನಡೆಸಲಾಯಿತು. ನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಆರಂಭವಾದ ಚಾಂದಿನಿ ಮೆರವಣಿಗೆಯು ಬನಶಂಕರಿ, ಸದಾಶಿವನಗರ, ನಜರಾಬಾದ್, ಚಾಂದಿನಿ ಸರ್ಕಲ್, ಪಿ.ಹೆಚ್. ಕಾಲೋನಿ, ಬಿ.ಜಿ. ಪಾಳ್ಯ ವೃತ್ತದ ಮುಖೇನ ಸಂತೆಪೇಟೆಯಲ್ಲಿ ಸಾಗಿತು. ನಂತರ ಮೆರವಣಿಗೆಯು ಮಂಡಿಪೇಟೆ ಮುಖ್ಯ ರಸ್ತೆಯಿಂದ ಗುಂಚಿಸರ್ಕಲ್, ಬಾರ್‌ಲೈನ್ ಮಸೀದಿ ಮುಖೇನ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು. ಚಾಂದಿನಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಮಹಮದ್ ಪೈಗಂಬರ್ ಹುಟ್ಟುಹಬ್ಬವನ್ನು ಈದ್ ಮಿಲಾದ್ ಹೆಸರಿನಲ್ಲಿ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ನಗರದಲ್ಲಿಯೂ ಅತ್ಯಂತ ಶಾಂತಿಯಿಂದ ಈ ಆಚರಣೆ ಮಾಡಲಾಗಿದೆ ಎಂದರು. ಐದು ನಿಯಮಗಳಾದ ದೇವರಲ್ಲಿ ಪ್ರಾರ್ಥನೆ, ನಂಬಿಕೆ, ದುಡಿಮೆಯ ಒಂದು ಭಾಗ ದಾನ ನೀಡುವ ಜಕಾತ್ ಇವುಗಳನ್ನು ಅಳವಡಿಸಿಕೊಂಡರೆ ಅದೇ ನಾವು ಪ್ರವಾದಿಗಳಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಪ್ರವಾದಿಗಳ ಹುಟ್ಟು ಹಬ್ಬದ ಅಂಗವಾಗಿ ಅವರ ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಿಲ್ಲಿ ಹಮ್ಮಿಕೊಂಡಿರುವ ಈ ಚಾಂದಿನಿ ಮೆರವಣಿಗೆ,ಎಲ್ಲಾ ಧರ್ಮದವರು ,ಜಾತಿಯವರು ಸೇರಿ ಮಾಡುವಂತಹ ಕಾರ್ಯವಾಗಿದೆ ಎಂದರು.ಪ್ರವಾದಿಗಳ ಸಂದೇಶದಂತೆ ನಾವು ನಮ್ಮ ನೆರೆಹೊರೆಯವರ ಜೊತೆ,ಶಾಂತಿ, ಸಹಬಾಳ್ವೆ ನಡೆಸಿದರೆ ಅದರು ದೇವರಿಗೆ ಪ್ರಿಯವಾದ ಕೆಲಸವಾಗಿದೆ.ಹಾಗಾಗಿ ನಮ್ಮಿಂದ ಯಾರಿಗೂ ತೊಂದರೆಯಾಗದ ರೀತಿ ನಾವು ನಡೆದುಕೊಳ್ಳಬೇಕಿದೆ ಎಂದರು.ಭಾರತ ಬಹುಧರ್ಮ,ಜಾತಿ, ಭಾಷೆ, ಸಂಸ್ಕೃತಿಗಳನ್ನು ಒಳಗೊಂಡ ದೇಶ. ಬಹುತ್ವವೇ ಭಾರತದ ನಿಜವಾದ ಜೀವಾಳ. ಹಾಗಾಗಿ ಪ್ರವಾದಿಗಳ ತತ್ವ ಸಂದೇಶದಲ್ಲಿ ನಡೆದುಕೊಂಡಾಗ ಮಾತ್ರ ನಿಜವಾದ ಮುಸ್ಲಿಂನಾಗಲು ಸಾಧ್ಯ ಎಂದರು.ವಕರು ತಮ್ಮಲಿರುವ ಉತ್ಸಾಹವನ್ನು ತೋರಿಸಲು ವ್ಹೀಲಿಂಗ್ ಮಾಡುವ ಬದಲು ಮೆರವಣಿಗೆಯಲ್ಲಿ ಶಾಂತಿಯಿಂದ ಪಾಲ್ಗೊಂಡು, ಬೇರೆಯವರಿಗೆ ತೊಂದರೆಯಾಗದಂತೆ ನಡೆದುಕೊಂಡರೆ ಆದೇ ನಾವು ದೇವರಿಗೆ ಸಲ್ಲಿಸುವ ನಿಜವಾದ ಪ್ರಾರ್ಥನೆ ಎಂದರು.ಪಾಲಿಕೆಯ ವಿರೋಧಪಕ್ಷದ ಮಾಜಿ ಅಧ್ಯಕ್ಷ ಜೆ.ಕುಮಾರ್ ಮಾತನಾಡಿ,ಪ್ರವಾದಿಗಳ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಗುತ್ತಿದೆ.ತುಮಕೂರು ನಗರ ಅತ್ಯಂತ ಭಾವೈಕತೆಯಿಂದ ಬಾಳುತ್ತಿರುವ ನಗರ.ಪ್ರವಾದಿಗಳ ದಾರಿಯಲ್ಲಿ ನಡೆಯುವುದು ಅತ್ಯಂತ ಕಷ್ಟದ ಕೆಲಸ. ಆವರ ದಾರಿಯಲ್ಲಿ ನಾವು ನಮ್ಮ ಕೈಲಾದ ಮಟ್ಟಿಗೆ ನಡೆಯುವ ಮೂಲಕ ಇತರರಿಗೆ ಮಾದರಿಯಾಗುವಂತಾಗಲಿ. ಹಿಂದು, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಒಗ್ಗೂಡಿ ಸಹೋದರತ್ವದಿಂದ ಬಾಳಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲ ಬರಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಸಾಗೋಣ, ಒಳ್ಳೆಯ ದೇಶ ಕಟ್ಟೋಣ ಎಂದರು.ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಡಿವೈಎಸ್ಪಿ ಚಂದ್ರಶೇಖರ್,ಮಾಜಿ ಶಾಸಕ ಎಸ್.ಷಪಿ ಅಹಮದ್,ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮದ್, ಇನಾಯತ್, ಹೆಚ್.ಡಿ.ಕೆ ಮಂಜುನಾಥ್, ಜೆ.ಕುಮಾರ್, ಮಹಮದ್‌ಪೀರ್,ಇಮ್ರಾನ್ ಪಾಷ,ಇಸ್ಮಾಯಿಲ್, ಉಪಸ್ಥಿತರಿದ್ದರು.ತುಮಕೂರಿನ ಎಲ್ಲಾ ಮಸೀದಿಗಳ ಮುತ್ತುವಲ್ಲಿಗಳು, ಇಮಾಮ್‌ಗಳು ಹಾಗೂ ಸಾವಿರಾರು ಜನರು ಚಾಂದಿನಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Share this article